masthmagaa.com:
‘ಜಮ್ಮು-ಕಾಶ್ಮೀರಕ್ಕೆ ಇದ್ದ ಧ್ವಜವನ್ನು ವಾಪಸ್ ಕೊಡುವವರೆಗೆ ನಾವು ತ್ರಿವರ್ಣ ಧ್ವಜವನ್ನು ಕೂಡ ಹಾರಿಸಲ್ಲ’ ಅಂತ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವಾಗ ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ಇದ್ದ ಧ್ವಜವನ್ನು ಟೇಬಲ್ ಮುಂದೆ ಇಟ್ಟುಕೊಂಡು ಮಾತನಾಡಿದ ಅವರು, ‘ಜಮ್ಮು-ಕಾಶ್ಮೀರದ ಧ್ವಜವೇ ತ್ರಿವರ್ಣ ಧ್ವಜದೊಂದಿಗಿನ ನಮ್ಮ ಸಂಬಂಧವನ್ನು ರೂಪಿಸಿತು. ಹೀಗಾಗಿ ಈ ಧ್ವಜ ನಮ್ಮ ಕೈ ಸೇರಿದ ಬಳಿಕವೇ ತ್ರಿವರ್ಣ ಧ್ವಜವನ್ನು ಕೂಡ ಹಾರಿಸುತ್ತೇವೆ’ ಎಂದಿದ್ದಾರೆ.
ಅಂದ್ಹಾಗೆ 2019ರಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ, ಆ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಾಗಿತ್ತು. ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಹೋದ ಬೆನ್ನಲ್ಲೇ ಆ ರಾಜ್ಯಕ್ಕಿದ್ದ ಧ್ವಜ ಕೂಡ ಮಾನ್ಯತೆ ಕಳೆದುಕೊಂಡಿತ್ತು. ಇದೀಗ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಹಲವು ಪಕ್ಷಗಳು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು, ಮೊದಲಿನಂತೆ ಮಾಡಬೇಕು ಅಂತ ಆಗ್ರಹಿಸುತ್ತಿವೆ. ಸುಮಾರು 9 ತಿಂಗಳುಗಳ ಕಾಲ ಗೃಹ ಬಂಧನದಲ್ಲಿದ್ದ ಮೆಹಬೂಬಾ ಮುಫ್ತಿ ಇತ್ತೀಚೆಗೆ ಬಿಡುಗಡೆಯಾಗಿದ್ದರು.
ಇನ್ನು ಆರ್ಟಿಕಲ್ 370ಯನ್ನು ಚೀನಾದ ಸಹಾಯದಿಂದ ಮರು ಸ್ಥಾಪಿಸುತ್ತೇವೆ ಅಂತ ಹೇಳಿದ್ದ ಫಾರುಖ್ ಅಬ್ದುಲ್ಲಾ ಬಗ್ಗೆ ಪ್ರತಿಕ್ರಿಯಿಸಿದ ಮುಫ್ತಿ, ‘ಚೀನಾ ಕೂಡ ಆರ್ಟಿಕಲ್ 370 ಬಗ್ಗೆ ಮಾತನಾಡುತ್ತಿದೆ. ಅದನ್ನು ವಿವಾದಾಸ್ಪದವೆಂದು ಮತ್ತು ಏಕೆ ಕೇಂದ್ರಾಡಳಿತ ಪ್ರದೇಶ ಮಾಡಲಾಗಿದೆ..? ಅಂತ ಚೀನಾ ಕೂಡ ಕೇಳುತ್ತಿದೆ’ ಎಂದರು.
-masthmagaa.com
Contact Us for Advertisement