masthmagaa.com:
ಪಂಜಾಬ್: ಕ್ರಿಕೆಟರ್ ಸುರೇಶ್ ರೈನಾ ಅವರ ಸಂಬಂಧಿಕರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಪ್ರಕರಣವನ್ನ ಬಗೆಹರಿಸಲಾಗಿದೆ ಅಂತ ಅಮರಿಂದರ್ ಸಿಂಗ್ ಸರ್ಕಾರ ಘೋಷಿಸಿದೆ. ಆರೋಪಿಗಳೆಲ್ಲರೂ ಅಂತಾರಾಜ್ಯ ದರೋಡೆಕೋರರ ಗ್ಯಾಂಗ್ವೊಂದರ ಸದಸ್ಯರಾಗಿದ್ದಾರೆ ಅಂತ ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ಧಾರೆ.
ಪ್ರಕರಣದಲ್ಲಿ ಇನ್ನೂ 11 ಆರೋಪಿಗಳ ಬಂಧನವಾಗಬೇಕಿದೆ. ಅವರಿಗಾಗಿ ಬಲೆ ಬೀಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಆಗಸ್ಟ್ 20ರಂದು ಪಂಜಾಬ್ನ ಪಠಾಣ್ಕೋಟ್ನಲ್ಲಿದ್ದ ರೈನಾ ಅವರ ಅಂಕಲ್ ಮನೆಗೆ ನುಗ್ಗಿದ ದರೋಡೆಕೋರರು ಹಣ ಚಿನ್ನಾಭರಣ ದೋಚಿದ್ದರು.
ಬಳಿಕ ಮನೆಯಿಂದ ಹೊರ ಹೋಗುವ ಮುನ್ನ ಕುಟುಂಬ ಸದಸ್ಯರ ತಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪರಿಣಾಮ ರೈನಾ ಅವರ ಅಂಕಲ್ ಅಶೋಕ್ ಕುಮಾರ್ ಮತ್ತು ಸೋದರ ಸಂಬಂಧಿ ಕೌಶಲ್ ಕುಮಾರ್ ಮೃತಪಟ್ಟಿದ್ದರು. ಅಶೋಕ್ ಕುಮಾರ್ ಅವರ ಪತ್ನಿ ಸ್ಥಿತಿ ಇನ್ನೂ ಗಂಭೀರವಾಗಿದೆ. ಈ ಘಟನೆ ಬೆನ್ನಲ್ಲೇ ಐಪಿಎಲ್ಗಾಗಿ ಯುಎಇಗೆ ಹಾರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಭಾರತಕ್ಕೆ ವಾಪಸ್ ಬರಬೇಕಾಯ್ತು.