masthmagaa.com:
ಪ್ರಸ್ತುತ AIADMK- ಬಿಜೆಪಿ ನಡುವೆ ಯಾವುದೇ ಮೈತ್ರಿ ಇಲ್ಲ ಅಂತ ತಮಿಳುನಾಡಿನ ಪ್ರತಿಪಕ್ಷ ಹೇಳಿದೆ. ನಾವು ಮೈತ್ರಿ ಬಗ್ಗೆ ಚುನಾವಣೆಗೂ ಮುನ್ನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ಹೇಳಿರುವ AIADMK ಹಿರಿಯ ನಾಯಕ ಡಿ ಜಯಕುಮಾರ್, ಅಣ್ಣಾಮಲೈ ವಿರುದ್ಧ ಹರಿಹಾಯ್ದಿದ್ದಾರೆ. ʻಅಣ್ಣಾಮಲೈ ಬಿಜೆಪಿ ರಾಜ್ಯ ಅಧ್ಯಕ್ಷರಾಗಿರಲು ಯೋಗ್ಯರಲ್ಲ. ತಮ್ಮನ್ನ ತಾವು ಬಿಂಬಿಸಿಕೊಳ್ಳುವ ಸಲುವಾಗಿಯಷ್ಟೇ ಅವರು ದಿವಂಗತ ನಾಯಕರ ಕುರಿತು ಕೆಟ್ಟದಾಗಿ ಮಾತನಾಡುತ್ತಾರೆ ಅಂತ ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮಾಡಿರುವ ಟೀಕೆಗೆ ಜಯಕುಮಾರ್ ಕಿಡಿಕಾರಿದ್ದಾರೆ. ಜೊತೆಗೆ ಬಿಜೆಪಿ ಕಾರ್ಯಕರ್ತರು ಬಯಸಿದ್ದರೂ, ಎಐಎಡಿಎಂಕೆ ಜತೆ ಮೈತ್ರಿ ಹೊಂದುವ ಬಯಕೆ ಅಣ್ಣಾಮಲೈಗೆ ಇಲ್ಲ. ಬಿಜೆಪಿಗೆ ಇಲ್ಲಿ ಹೆಜ್ಜೆ ಇಡೋದು ಸಾಧ್ಯವಿಲ್ಲ. ನಿಮ್ಮ ಮತ ಬ್ಯಾಂಕ್ ಯಾವುದು ಅಂತ ಗೊತ್ತಿದೆ. ನೀವು ನಮ್ಮ ಕಾರಣದಿಂದಾಗಿ ಇಲ್ಲಿ ಪರಿಚಿತರಾಗಿದ್ದೀರಿ ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಜೂನ್ ತಿಂಗಳಲ್ಲಿ ಜಯಲಲಿತಾ ಬಗ್ಗೆ ಅಣ್ಣಾಮಲೂ ನೀಡಿದ್ದ ಹೇಳಿಕೆ AIADMK ಕೆಂಗಣ್ಣಿಗೆ ಗುರಿಯಾಗಿತ್ತು. ತಮಿಳುನಾಡಿನಲ್ಲಿ ಬಿಜೆಪಿಗೆ ಏಕೈಕ ಮಿತ್ರಪಕ್ಷವಾಗಿರುವ AIADMK ಜೊತೆ ಅಣ್ಣಾಮಲೈ ಸಂಬಂಧ ಉತ್ತಮವಾಗಿಲ್ಲ. ಆಡಳಿತಾರೂಢ ಡಿಎಂಕೆ ಹಾಗೂ ಮಿತ್ರ ಪಕ್ಷ AIADMK ಎರಡರ ವಿರುದ್ಧವೂ ಅವರು ಆಗಾಗ್ಗೆ ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗಾಗಿ AIADMK ಮೈತ್ರಿ ಬಗ್ಗೆ ಯೋಚಿಸೊದಾಗಿ ಹೇಳಿದೆ. ಇತ್ತ ಕರ್ನಾಟಕದಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಅಲ್ದೇ ವಿರೋಧ ಪಕ್ಷಗಳ INDIA ಬಣಕ್ಕೆ ಪ್ರತಿಯಾಗಿ NDA ಮೈತ್ರಿಕೂಟವನ್ನ ಬಲಪಡಿಸುವ ಬಿಜೆಪಿ ಪ್ರಯತ್ನಕ್ಕೆ ಇದ್ರಿಂದ ದಕ್ಷಿಣ ರಾಜ್ಯದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.
-masthmagaa.com
Contact Us for Advertisement