masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿರುವಾಗಲೇ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ದಿಶಾ ಸಾಲಿಯಾನ್ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ. ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆ ಅಂತ ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ದಿಶಾ​ಳ ಪ್ರಿಯಕರ ಮಂಗಳೂರು ಮೂಲದ ರೋಹನ್ ರಾಯ್​ಗೆ ಎಲ್ಲವೂ ಗೊತ್ತು, ಆತ ತಲೆ ಮರೆಸಿಕೊಂಡಿದ್ದಾನೆ ಎಂದಿದ್ದಾರೆ.

ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಜೊತೆ ಮಾತಾಡಿದ ನಿತೇಶ್ ರಾಣೆ, ‘ದಿಶಾಳ ಸಾವು ಸಂಭವಿಸಿದ ಜೂನ್​ 8ರ ರಾತ್ರಿ ಏನಾಯ್ತು ಅನ್ನೋದು ನನಗೆ ಗೊತ್ತಿದೆ. ಬೇಕಿದ್ರೆ ಅದನ್ನು ನಾನು ಬಹಿರಂಗ ಪಡಿಸ್ತೀನಿ. ನನ್ನ ಬಳಿ ಇರುವ ಎಲ್ಲಾ ಮಾಹಿತಿಯೊಂದಿಗೆ ಸಿಬಿಐ ಬಳಿ ಹೋಗ್ತೀನಿ. ಈ ಮೂಲಕ ದಿಶಾ ಸಾವಿಗೂ ಸುಶಾಂತ್ ಸಾವಿಗೂ ಏನು ಸಂಬಂಧವಿದೆ ಅನ್ನೋದು ಸ್ಪಷ್ಟವಾಗುತ್ತೆ. ಆದ್ರೆ ಈ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ದಿಶಾಳ ಪ್ರಿಯಕರ ರೋಹನ್ ರಾಯ್​ಗೆ ಎಲ್ಲವೂ ಗೊತ್ತಿದೆ. ಆದ್ರೆ ಆತ ಈಗ ಮುಂಬೈ ಬಿಟ್ಟು ಹುಟ್ಟೂರು ಮಂಗಳೂರಿಗೆ ಹೋಗಿದ್ದಾನೆ. ಆತನನ್ನು ವಿಚಾರಣೆ ನಡೆಸಿದ್ರೆ ಎಲ್ಲವೂ ಹೊರ ಬರಲಿದೆ’ ಎಂದಿದ್ದಾರೆ.

ಅಂದ್ಹಾಗೆ ಜೂನ್ 8ರಂದು ದಿಶಾ ಸಾಲಿಯಾನ್ ಸಾವಿಗೂ ಮುನ್ನ ಮುಂಬೈನ ಜುಹುನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಆಕೆ ಭಾಗಿಯಾಗಿದ್ದಳು. ಇದರಲ್ಲಿ ರಾಜಕಾರಣಿಗಳು, ಬಿಲ್ಡರ್​ಗಳು, ಓರ್ವ ನಟಿಯ ಸಹೋದರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆದ್ರೆ ಪಾರ್ಟಿಯಲ್ಲಿ ಏನೋ ದೊಡ್ಡ ಘಟನೆ ನಡೆದಿದೆ. ತಕ್ಷಣ ದಿಶಾ ಸಾಲಿಯಾನ್ ಅಲ್ಲಿಂದ ಹೊರ ನಡೆದಿದ್ದಾಳೆ. ದಾರಿ ಮಧ್ಯೆ ಸುಶಾಂತ್ ಸಿಂಗ್​ಗೆ ಕಾಲ್ ಮಾಡಿ ಎಲ್ಲವನ್ನು ವಿವರಿಸಿದ್ದಾಳೆ. ನಂತರ ಮಲಾಡ್​ನ ಅಪಾರ್ಟ್​ಮೆಂಟ್​ಗೆ ಬಂದು ಪ್ರಿಯಕರ ರೋಹನ್​ ರಾಯ್​ಗೂ ಹೇಳಿದ್ದಾಳೆ. ಮತ್ತೊಂದುಕಡೆ ಪಾರ್ಟಿಯಲ್ಲಿ ಭಾಗವಹಿಸಿದ್ದವರು ರಿಹಾ ಚಕ್ರಬರ್ತಿಗೆ ಕಾಲ್ ಮಾಡಿ ದಿಶಾ ಸಾಲಿಯಾನ್ ಹೀಗೆಲ್ಲಾ ಮಾಡ್ತಿದ್ದಾಳೆ ಅಂತ ಮಾಹಿತಿ ನೀಡಿದ್ದಾರೆ. ಅಲ್ಲದೆ ಆಕೆಯ ಹಿಂದೆ ಜರನ್ನು ಕಳಿಸಿ ಕೊಲೆ ಮಾಡಿದ್ದಾರೆ ಅಂತ ನಿತೇಶ್ ರಾಣೆ ಹೇಳಿದ್ದಾರೆ.

ಜೂನ್ 8ರಂದು ರಾತ್ರಿ 2 ಗಂಟೆ ಸುಮಾರಿಗೆ ದಿಶಾ ಸಾಲಿಯಾನ್​ ತಮ್ಮ ಬಿಲ್ಡಿಂಗ್​ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಅಂತ ಹೇಳಲಾಗಿತ್ತು. ಆದ್ರೆ ಅದು ಆತ್ಮಹತ್ಯೆಯಲ್ಲಿ ಕೊಲೆ ಎಂಬ ಬಗ್ಗೆಯೂ ಅನುಮಾನ ಇತ್ತು. ಇದೀಗ ಆ ಅನುಮಾನ ಮತ್ತಷ್ಟು ಬಲವಾಗ್ತಿದೆ. ಅಲ್ಲದೆ ದಿಶಾ ಸಾವನ್ನಪ್ಪಿ ಅರ್ಧ ಗಂಟೆಯಾದ್ರೂ ಪ್ರಿಯಕರ ರೋಹನ್ ರಾಯ್ ಕೆಳಗಿಳಿದು ಬಂದಿರಲಿಲ್ಲ ಅನ್ನೋ ಬಗ್ಗೆಯೂ ನನಗೆ ಮಾಹಿತಿ ಇದೆ ಅಂತ ನಿತೇಶ್ ರಾಣೆ ಹೇಳಿದ್ದಾರೆ. ದಿಶಾ ಮತ್ತು ರೋಹನ್ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ರು. ಮುಂದಿನ ವರ್ಷ ಮದುವೆಯಾಗಲು ಪ್ಲಾನ್ ಮಾಡಿದ್ರು. ಆದ್ರೆ ಆಕೆಯ ಸಾವಿನ ನಂತರ ರೋಹನ್ ರಾಯ್ ನಾಪತ್ತೆಯಾಗಿದ್ದಾನೆ. ಆತ ಮುಂಬೈ ಬಿಟ್ಟು ಹುಟ್ಟೂರು ಮಂಗಳೂರಿಗೆ ಹೋಗಿದ್ದಾನೆ. ಆತ ಯಾಕೆ ಎಲ್ಲರ ಮುಂದೆ ಬಂದು ದಿಶಾಳದ್ದು ಆತ್ಮಹತ್ಯೆಯಲ್ಲ ಅಂತ ಹೇಳ್ತಿಲ್ಲ..? ಅಂತ ನಿತೇಶ್ ರಾಣೆ ಪ್ರಶ್ನಿಸಿದ್ದಾರೆ.

ಕಟ್ಟಡದಿಂದ ಬಿದ್ದರೂ ರಕ್ತದ ಕಲೆ ಇರಲಿಲ್ಲ..!

ಇನ್ನು ರಿಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್​ನಲ್ಲಿ ಜೂನ್ 8ರಂದು ಕರ್ತವ್ಯದಲ್ಲಿದ್ದ ಕಟ್ಟಡದ ಸೆಕ್ಯೂರಿಟಿ ಗಾರ್ಡ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಅಂದು ರಾತ್ರಿ ನಾನೇ ಡ್ಯುಟಿಯಲ್ಲಿದ್ದೆ. ರಾತ್ರಿ 2 ಗಂಟೆ ಸುಮಾರಿಗೆ ದಿಶಾ ಸಾಲಿಯಾನ್ ಕಟ್ಟಡದಿಂದ ಕೆಳಗೆ ಬಿದ್ದರು. ನಾನು ಪೊಲೀಸರಿಗೆ ಕಾಲ್ ಮಾಡಿ ಮಾಹಿತಿ ನೀಡಿದೆ. ಆದ್ರೆ ಪೊಲೀಸರು ಬರುವ ಮುನ್ನವೇ ದಿಶಾಳ ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ದಿಶಾಳ ದೇಹದ ಮೇಲೆ ಯಾವುದೇ ರಕ್ತದ ಕಲೆ ಇರಲಿಲ್ಲ ಎಂದಿದ್ದಾರೆ. ಜೊತೆಗೆ ದಿಶಾಳ ಸಾವಿನ ನಂತರವಷ್ಟೇ ಆಕೆ ಕಟ್ಟಡದಿಂದ ಜಿಗಿದ ಸ್ಥಳದಲ್ಲಿ ಬಿಳಿ ಬಣ್ಣದ ಗ್ರಿಲ್ ಅಳವಡಿಸಲಾಯ್ತು ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ದಿಶಾ ಸಾಲಿಯಾನ್ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿಸುತ್ತಿವೆ. ದಿಶಾಳನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಲಾಗಿತ್ತಾ ಅಥವಾ ಮೊದಲೇ ಕೊಲೆ ಮಾಡಿ ಕಟ್ಟಡದಿಂದ ಕೆಳಗೆ ಎಸೆಯಲಾಗಿತ್ತಾ ಅನ್ನೋ ಪ್ರಶ್ನೆ ಮೂಡಿದೆ. ಅಲ್ಲದೆ ಪಾರ್ಟಿಯಲ್ಲಿ ನಡೆದ ಘಟನೆ ಬಗ್ಗೆ ದಿಶಾ ಸುಶಾಂತ್​ಗೂ ತಿಳಿಸಿದ್ದಳು. ಆಕೆಯ ಸಾವು ಸಂಭವಿಸಿದ 6 ದಿನದಲ್ಲೇ ಸುಶಾಂತ್​ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು.

-masthmagaa.com

Contact Us for Advertisement

Leave a Reply