masthmagaa.com:
ಟಿಆರ್ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ರಿಪಬ್ಲಿಕ್ ಟಿವಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಬಾಲಿವುಡ್ ವಿರುದ್ಧ ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿ ಮಾಡುವಂತಹ ಟೀಕೆ-ಟಿಪ್ಪಣಿಗಳನ್ನ ಮಾಡದಂತೆ ಕೆಲ ಮಾಧ್ಯಮಗಳಿಗೆ ತಡೆ ನೀಡಬೇಕು ಅಂತ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ರಿಪಬ್ಲಿಕ್ ಟಿವಿ, ಅರ್ನಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ಟೈಮ್ಸ್ ನೌ, ಟೈಮ್ಸ್ ನೌನ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ನಾವಿಕಾ ಕುಮಾರ್ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಾಲಿವುಡ್ನ 4 ಅಸೋಸಿಯೇಷನ್ ಮತ್ತು 34 ಚಿತ್ರ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಆಮಿರ್ ಖಾನ್ ಪ್ರೊಡಕ್ಷನ್ಸ್, ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್, ಅಜಯ್ ದೇವ್ಗನ್ ಫಿಲ್ಮ್ಸ್, ಧರ್ಮಾ ಪ್ರೊಡಕ್ಷನ್ಸ್, ರೋಹಿತ್ ಶೆಟ್ಟಿ ಪ್ರೊಡಕ್ಷನ್ಸ್ ಕೂಡ ಸೇರಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಬಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಸೇರಿದಂತೆ ಹಲವು ಮಾಧ್ಯಮಗಳು ಬಾಲಿವುಡ್ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದವು. ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಇದೀಗ ಇವರೆಲ್ಲರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಲಾಗಿದೆ.
ಮತ್ತೊಂದುಕಡೆ ಅಕ್ಟೋಬರ್ 7ರಂದು ಜೈಲಿನಿಂದ ಬಿಡುಗಡೆಯಾಗಿರುವ ನಟಿ ರಿಯಾ ಚಕ್ರಬರ್ತಿ ಹಲವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರಲ್ಲಿ ರಿಯಾ ಅವರ ನೆರೆಮನೆಯವರು ಕೂಡ ಸೇರಿದ್ದಾರೆ. ಯಾಕಂದ್ರೆ ಜೂನ್ 13ರಂದು (ಸುಶಾಂತ್ ಸಾವು ಸಂಭವಿಸಿದ ಒಂದು ದಿನ ಮುನ್ನ) ರಿಯಾ ಮತ್ತು ಸುಶಾಂತ್ ಅವರನ್ನು ಒಟ್ಟಿಗೆ ನೋಡಿದ್ದೆ ಅಂತ ರಿಯಾಳ ‘ಪ್ರಿಮ್ ರೋಸ್’ ಅಪಾರ್ಟ್ಮೆಂಟ್ನ ಪಕ್ಕದ ಮನೆಯವರು ಹೇಳಿದ್ದರು. ಆದ್ರೀಗ ತಮ್ಮ ಹೇಳಿಕೆಯನ್ನ ಸಿಬಿಐ ಮುಂದೆ ಸಮರ್ಥಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ ಅಂತ ವರದಿಯಾಗಿದೆ. ಇಂತಹವರ ವಿರುದ್ಧ ಕಾನೂನು ಸಮರ ಸಾರಲು ರಿಯಾ ನಿರ್ಧರಿಸಿದ್ದಾರೆ.
-masthmagaa.com
Contact Us for Advertisement