masthmagaa.com:

ಮಾದಕ ವಸ್ತು ದಂಧೆ ಪ್ರಕರಣದ ಆರೋಪಿ ನಂಬರ್ 6 ಆದಿತ್ಯ ಆಳ್ವಗೆ ಸಿಸಿಬಿ ಶಾಕ್ ನೀಡಿದೆ. ಆದಿತ್ಯ ಆಳ್ವಗೆ ಸೇರಿದ ಬೆಂಗಳೂರಿನ ಹೆಬ್ಬಾಳದಲ್ಲಿರುವ ‘ಹೌಸ್ ಆಫ್ ಲೈಫ್’ ರೆಸಾರ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕೋರ್ಟ್​ನಿಂದ ಸರ್ಚ್​ ವಾರಂಟ್ ಪಡೆದು ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಂಚಿಂಚೂ ಜಾಲಾಡಿದ್ದಾರೆ. ಈ ವೇಳೆ ರೆಸಾರ್ಟ್​ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಅಂತ ವರದಿಯಾಗಿದೆ.

ಸಿಸಿಬಿ ಇನ್ಸ್‌ಪೆಕ್ಟರ್‌ಗಳಾದ ಅಂಜುಮಾಲಾ ನಾಯಕ್, ಹರೀಶ್, ಪುನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ರೆಸಾರ್ಟ್‌ನಲ್ಲಿ ಕೆಲಸದವರು ಮಾತ್ರ ಇದ್ದರು. ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರನಾಗಿರುವ ಆದಿತ್ಯ ಆಳ್ವ ಸದ್ಯ ತಲೆಮರೆಸಿಕೊಂಡಿದ್ದಾನೆ. ಆದ್ರೆ ಮ್ಯಾನೇಜರ್ ರಾಮದಾಸ್‌ನನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಡ್ರಗ್ಸ್​ ಪ್ರಕರಣದಲ್ಲಿ ‘ಈ ವಾರ ಮಹತ್ವದ್ದು’ ಅಂತ ಇತ್ತೀಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆದಿತ್ಯ ಆಳ್ವಗೆ ಸೇರಿದ ರೆಸಾರ್ಟ್​ನಲ್ಲಿ ಸಿಸಿಬಿ ಪೊಲೀಸರು ಶೋಧಕಾರ್ಯ ನಡೆಸುತ್ತಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply