ನೆರೆ ಪರಿಹಾರ ಇವತ್ತು ಬರುತ್ತೆ ನಾಳೆ ಬರುತ್ತೆ ಅಂತ ನಾವೇ ಹಾರಿಸಿ ಕಳಿಸಿದ ನಮ್ ಸಂಸದರು, ಸಚಿವರು ಹೇಳಿದ್ದೆ ಹೇಳಿದ್ದು… ಆದ್ರೆ ಈಗ ನೋಡಿ ರಾಜ್ಯ ಸರ್ಕಾರದ ನೆರೆ ನಷ್ಟದ ವರದಿಯನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ.. ರಾಜ್ಯಕ್ಕೆ ಬಂದಿದ್ದ ಕೇಂದ್ರದ ಅಧ್ಯಯನ ತಂಡ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿತ್ತು. ಅದೇ ರೀತಿ ರಾಜ್ಯ ಸರ್ಕಾರ ಕೂಡ ವರದಿ ಸಿದ್ಧಪಡಿಸಿ, 38 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ, ಅದರಲ್ಲೂ 3,500 ಕೋಟಿ ಪರಿಹಾರ ಈಗಲೇ ನೀಡುವಂತೆ ಮನವಿ ಮಾಡಿತ್ತು. ಆದ್ರೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ರಾಜ್ಯದ ವರದಿಗೂ ಕೇಂದ್ರದ ಅಧ್ಯಯನ ತಂಡ ನೀಡಿದ ವರದಿಗೂ ತಾಳೆಯಾಗುತ್ತಿಲ್ಲ. ರಾಜ್ಯದಲ್ಲಿ 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿಲ್ಲ. ಕುಸಿದ ಮನೆಗಳೆಲ್ಲಾ 5 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದ್ದವಾ..? ಎಂದು ರಾಜ್ಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅದೂ ಅಲ್ಲದೆ ಎಲ್ಲವನ್ನು ಮತ್ತೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಸೂಚಿಸಿದೆ. ಇದರಿಂದ ರಾಜ್ಯಕ್ಕೆ ಕೇಂದ್ರಿದಂದ ಪರಿಹಾರ ಸಿಗೋದು ಮತ್ತಷ್ಟು ವಿಳಂಬವಾಗಲಿದೆ.
ಸರ್ಕಾರದ ಬಳಿ ಎಲ್ಲಿದೆ ಹಣ..? ಎಲ್ಲಾ ಖಾಲಿ..!
ಬೆಳಗಾವಿ ನೆರೆ ಪೀಡಿತ ಪ್ರದೇಶಗಳ ಪರಿಶೀಲನೆಯಲ್ಲಿರುವ ಮುಖ್ಯಮಂತ್ರಿಗಳು ಸರ್ಕಾರದ ಬಳಿ ಹಣ ಇಲ್ಲ..ಎಲ್ಲ ಖಾಲಿ ಅಂತ ಅಸಹಾಯಕತೆ ಹೊರಹಾಕಿದ್ದಾರೆ. ಒಂದ್ಕಡೆ ಕೇಂದ್ರ ಸರ್ಕಾರ ವರದಿ ತಿರಸ್ಕರಿಸಿದ್ರೆ, ಇತ್ತ ರಾಜ್ಯ ಸರ್ಕಾರ ಪಾಪರ್ ಮಾತನಾಡಿ ನೆರೆ ಸಂತ್ರಸ್ತರ ಕೈಬಿಟ್ಟಿದೆ. ಹೀಗಾದ್ರೆ ನೆರೆ ಸಂತ್ರಸ್ತರ ಪಾಡೇನು.? ಅನ್ನೋದು ಪ್ರಶ್ನೆ.