ಆಗಸ್ಟ್ 19ಕ್ಕೆ ಡಾಲಿ ಧನಂಜಯ, ರಚಿತಾ ರಾಮ್‌ರಿಂದ ‘ಮಾನ್ಸೂನ್ ರಾಗ’!

masthmagaa.com:

ಡಾಲಿ ಧನಂಜಯ, ರಚಿತಾ ರಾಮ್ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್‌ ರಿಲೀಸ್ ಆಗುತ್ತಿದೆ ಎಂದು ಹೇಳಲು ಈ ಚಿತ್ರತಂಡ ಸಣ್ಣ ಟೀಸರ್ ರಿಲೀಸ್ ಮಾಡಿತ್ತು, ಆ ಟೀಸರ್‌ಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಸಿನಿಮಾ ನೋಡಲು ಪ್ರೇರೇಪಿಸಿದೆ.

ಬಹುನಿರೀಕ್ಷಿತ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ರಾಜ್ಯಾದ್ಯಂತ ಆಗಸ್ಟ್ 19ಕ್ಕೆ ಸಂಪೂರ್ಣ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನಿಮಾವಂತೆ. ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವುದು ವಿಶೇಷ.

ಟ್ರೈಲರ್ ರಿಲೀಸ್ ನಂತರ ಈ ಚಿತ್ರದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ರಚಿತಾ ರಾಮ್ “ಡಾಲಿ ಧನಂಜಯ ಅವರು ನಿಜಕ್ಕೂ ನಟ ರಾಕ್ಷಸ. ಅವರ ಜೊತೆ ನಟಿಸೋದು ನನಗೂ ಚಾಲೆಂಜಿಂಗ್ ಆಗಿತ್ತು, ಈ ಚಿತ್ರದ ಸಂಭಾಷಣೆ ತುಂಬ ಚೆನ್ನಾಗಿದೆ. ಇಡೀ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ನಾನು ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ತುಂಬ ನೀಟ್ ಆಗಿ ಚೆನ್ನಾಗಿ ತೋರಿಸಿದ್ದಾರೆ. ಪುಷ್ಪಕ ವಿಮಾನ ಸಿನಿಮಾದಲ್ಲಿ ನಾನು ನಟಿಸಿದ್ದೆ, ಆ ಚಿತ್ರದ ಕೆಲಸ ಹೇಗೆ ಅಂತ ಗೊತ್ತಿದೆ. ಅದೇ ತಂಡ ಈ ಸಿನಿಮಾ ಮಾಡಿದೆ, ಮತ್ತೆ ಅವರ ಜೊತೆ ಕೆಲಸ ಮಾಡಿದ್ದು ತುಂಬ ಖುಷಿ ಕೊಟ್ಟಿದೆ. ಮಾನ್ಸೂನ್ ಸಮಯದಲ್ಲಿ ನಮ್ಮ ಈ ಸಿನಿಮಾ ಶೂಟಿಂಗ್ ಮಾಡಿದ್ದೆವು, ಆದರೆ ಮಾನ್ಸೂನ್ ಸಮಯದಲ್ಲಿ ರಿಲೀಸ್ ಆಗತ್ತೆ ಅಂತ ಗೊತ್ತಿರಲಿಲ್ಲ. ಈ ಸಿನಿಮಾ ಹಾಡುಗಳನ್ನು ಕೇಳಿದರೆ ಮೈ ರೋಮಾಂಚನವಾಗುವುದು. ಇದರಲ್ಲಿ ಪ್ರತಿ ಪಾತ್ರವನ್ನು ಕೂಡ ತುಂಬ ಅದ್ಭುತವಾಗಿ ತೋರಿಸಿದ್ದಾರೆ” ಎಂದಿದ್ದಾರೆ.

ಡಾಲಿ ಧನಂಜಯ ಅವರು, “ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ರಚಿತಾ ರಾಮ್ ಜೊತೆ ಮೊದಲ ಬಾರಿಗೆ ನಟಿಸಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರುವ ನಟಿ ರಚಿತಾ ಅವರು ನನ್ನ ಜೊತೆ ಅದ್ಭುತವಾಗಿ ಆರಾಮಾಗಿ ನಟಿಸಿದ್ದಾರೆ. ಸುಹಾಸಿನಿ, ಯಶಾ ಶಿವಕುಮಾರ್ ಅವರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ದಯವಿಟ್ಟು ನೋಡಿ. ಇಲ್ಲಿ ಮುಜುಗರ ಆಗುವಂತಹ ದೃಶ್ಯ ಇಲ್ಲ, ಇಡೀ ಕುಟುಂಬ ಕೂತು ಈ ಸಿನಿಮಾ ನೋಡಬಹುದು, ಇಡೀ ರಾತ್ರಿಯೆಲ್ಲ ಮಳೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದೇವೆ. ರಚಿತಾ ರಾಮ್ ಕಣ್ಣುಗಳಲ್ಲಿ ವಿಷಯ ಇದೆ ಅಂತ ನಾವು ಮಾತನಾಡಿಕೊಳ್ಳುತ್ತಿರುತ್ತೇವೆ. ಆ ಬಗ್ಗೆಯೂ ಸಿನಿಮಾದಲ್ಲಿದೆ” ಎಂದಿದ್ದಾರೆ.

“ಇದುವರೆಗೂ ನೋಡಿರದ ಪಾತ್ರದಲ್ಲಿ ರಚಿತಾ ರಾಮ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ದೃಶ್ಯದಲ್ಲಿ ಧನಂಜಯ, ರಚಿತಾ ರಾಮ್ ಅವರು ಚಾಲೆಂಜಿಂಗ್ ಆಗಿ ನಟಿಸಿದ್ದಾರೆ.ಅಚ್ಯುತ್ ಕುಮಾರ್ ಅವರು ಸೀರಿಯಸ್ ಆಗಿದ್ದೂ ನಗಿಸುತ್ತಾರೆ. ಸುಹಾಸಿನಿ, ಅಚ್ಯುತ್ ಕುಮಾರ್ ಅವರ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ. ಯಶಾ ಶಿವಕುಮಾರ್ ಅವರ ಡ್ಯಾನ್ಸ್ ಹೇಗಿದೆ ಎಂದು ‘ರಾಗ ಸುಧಾ’ ಎಂಬ ಹಾಡಲ್ಲಿ ನೋಡಿದ್ದೀರಿ, ಅಭಿನಯವನ್ನು ನೀವು ಸಿನಿಮಾದಲ್ಲಿ ನೋಡಬೇಕು” ಎಂದಿದ್ದಾರೆ ನಿರ್ದೇಶಕ ಎಸ್ ರವೀಂದ್ರನಾಥ್

“80% ಸಿನಿಮಾ ಮಳೆಯಲ್ಲಿ ಶೂಟಿಂಗ್ ಮಾಡಲಾಗಿದೆ. ನಾವು ಸುಮ್ಮನೆ ಕಲಾವಿದರನ್ನು ಕರೆದುಕೊಂಡು ಸಿನಿಮಾ ಮಾಡೋದಿಲ್ಲ, ಸಿನಿಮಾ ಕಂಟೆಂಟ್‌ ಜನರಿಗೆ ರೀಚ್ ಆಗಬೇಕು, ಪಾತ್ರಕ್ಕೆ ಹೊಂದಿಕೆಯಾಗಬೇಕು ಎಂದು ಯಾರನ್ನು ಬೇಕಾದರೂ ಕಾಂಟ್ಯಾಕ್ಟ್ ಮಾಡಿ ಪಾತ್ರ ಮಾಡಿಸಲು ಒಪ್ಪಿಸುತ್ತೇವೆ. ಕೊರೊನಾ ಸಮಯದಲ್ಲಿ ಕಾಳಜಿಯಿಂದ ಈ ಚಿತ್ರ ಶೂಟಿಂಗ್ ಮಾಡಿದ್ದೇವೆ. ಇಡೀ ಸಿನಿಮಾ ತುಂಬ ಚೆನ್ನಾಗಿ ಬಂದಿದೆ” ಎಂದಿದ್ದಾರೆ ನಿರ್ಮಾಪಕ ವಿಖ್ಯಾತ್

ನಟಿ ಸುಹಾಸಿನಿ, ಶೋಭರಾಜ್, ಯಶಾ ಶಿವಕುಮಾರ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗುರು ಕಶ್ಯಪ್ ಅವರು ಈ ಚಿತ್ರದ ಸಂಭಾಷಣೆ ಬರೆದಿದ್ದರು, ಆದರೆ ಅವರು ಇಂದು ದೈಹಿಕವಾಗಿ ಇಲ್ಲ. ಎಸ್ ಕೆ ರಾವ್ ಛಾಯಾಗ್ರಹಣ, ಅನುಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.

-masthmagaa.com

Contact Us for Advertisement

Leave a Reply