masthmagaa.com:
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನ ಮುಂಬೈ ಪಾಲಿಕೆ ಅಧಿಕಾರಿಗಳು ಕೆಡವಿದ್ದು ಕೆಟ್ಟ ಉದ್ದೇಶದಿಂದ ಕೂಡಿದೆ. ಹೀಗಾಗಿ ಕಟ್ಟಡಕ್ಕೆ ಆದ ಹಾನಿಯನ್ನು ಪರಿಶೀಲಿಸಲು ಮೌಲ್ಯಮಾಪಕರನ್ನು ನೇಮಿಸುವಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೌಲ್ಯಮಾಪಕರು ಕೋರ್ಟ್ಗೆ ವರದಿ ಸಲ್ಲಿಸುತ್ತಾರೆ. ಬಳಿಕವಷ್ಟೇ ಕಂಗನಾ ರಣಾವತ್ಗೆ ಎಷ್ಟು ಹಣವನ್ನ ಪರಿಹಾರವಾಗಿ ನೀಡಬೇಕು ಅನ್ನೋ ಬಗ್ಗೆ ಕೋರ್ಟ್ ಆದೇಶ ಹೊರಡಿಸಲಿದೆ ಅಂತ ಬಾಂಬೆ ಹೈಕೋರ್ಟ್ ಹೇಳಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಬಗ್ಗೆ ಕಾಮೆಂಟ್ ಮಾಡುವಾಗ ಸಂಯಮ ತೋರಬೇಕು ಅಂತ ಕಂಗನಾ ರಣಾವತ್ಗೆ ಸೂಚಿಸಲಾಗಿದೆ.
ಅಂದ್ಹಾಗೆ ಸೆಪ್ಟೆಂಬರ್ನಲ್ಲಿ ಮುಂಬೈನ ಪಾಲಿ ಹಿಲ್ನಲ್ಲಿದ್ದ ಕಂಗನಾ ರಣಾವತ್ ಅವರ ಕಚೇರಿ ಮತ್ತು ಬಂಗಲೆಯನ್ನ ಬಿಎಂಸಿ ಅಧಿಕಾರಿಗಳು ಕೆಡವಿ ಹಾಕಿದ್ರು. ಈ ಸಂಬಂಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾ, ಆಗಿರುವ ನಷ್ಟಕ್ಕೆ 2 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ರು. ಆದ್ರೆ ಕಂಗನಾ 2 ಕೋಟಿ ಕೇಳೋದ್ರಲ್ಲಿ ಅರ್ಥಾನೇ ಇಲ್ಲ ಅಂತ ಬಿಎಂಸಿ ಕೋರ್ಟ್ಗೆ ತಿಳಿಸಿತ್ತು. ಇದೀಗ ಕೋರ್ಟ್ ಬಿಎಂಸಿ ನಡೆ ದುರುದ್ದೇಶದಿಂದ ಕೂಡಿತ್ತು ಅಂತ ಹೇಳಿದೆ.
-masthmagaa.com
Contact Us for Advertisement