ವಿಜಯಾನಂದ ಚಿತ್ರದ ‘ಹಾಗೆ ಆದ ಆಲಿಂಗನ’ ಹಾಡಿಗೆ ಅಭೂತಪೂರ್ವ ಪ್ರತಿಕ್ರಿಯೆ!

masthmagaa.com:

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ “ವಿಜಯಾನಂದ”. ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿರುವ ಈ ಚಿತ್ರದ “ಹಾಗೆ ಆದ ಆಲಿಂಗನ” ಎಂಬ ಹಾಡು ಬಿಡುಗಡೆಯಾಗಿದೆ. ಧನಂಜಯ್ ರಂಜನ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಇಂಪಾಗಿ ಹಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಯಿತು. ಮಲೆಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, “ಗೀತಾ ಗೋವಿಂದಂ” ಸೇರಿದಂತೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ವಿಜಯ ಸಂಕೇಶ್ವರ ಚಿತ್ರದ ಕುರಿತು ಮಾತನಾಡಿದರು. ನನ್ನ‌ ಜೀವನಾಧಾರಿತ ಸಿನಿಮಾ ಮಾಡುವುದಾಗಿ ನಿರ್ದೇಶಕಿ ರಿಶಿಕಾ ಶರ್ಮ ಕೇಳಿದಾಗ, ಈ ಚಿಕ್ಕ ಹುಡುಗಿ ಏನು ಮಾಡುತ್ತಾಳೆ? ಅನಿಸಿತು. ಆದರೆ ಈಗ, ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಶಿಕಾ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನನ್ನ ಮಗ ಆನಂದ್ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ನನ್ನ‌ ಕುಟುಂಬವರೆಲ್ಲಾ ಉದ್ಯಮಿಗಳು. ನಮ್ಮ ತಂದೆಯವರು ಸಹ.‌ ನಾನು ಹದಿನೈದನೇ ವಯಸ್ಸಿಗೆ ಕೆಲಸ ಶುರು ಮಾಡಿದೆ. ನಮ್ಮ‌ ತಂದೆ ಬಳಿ ಹೋಗಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಶುರು ಮಾಡುತ್ತೇನೆ ಅಂದಾಗ ಅವರು ಗಾಬರಿಯಾದರು.

ಅಂದು ಒಂದು ಲಾರಿಯಿಂದ ಆರಂಭವಾದ ನನ್ನ ಉದ್ಯಮ, ಇಂದು ಬೃಹತಾಗಿ ಬೆಳೆದಿದೆ. ಟ್ರಾನ್ಸ್ ಪೋರ್ಟ್ ಹಾಗೂ ಮಾಧ್ಯಮ ಎರಡರಲ್ಲೂ ನಾವು ಮುಂದಿದ್ದೇವೆ. ನನ್ನ ಹಿಂದಿನ ಶಕ್ತಿ ನನ್ನ ಪತ್ನಿ ಲಲಿತಾ ಎಂದರೆ ತಪ್ಪಾಗಲಾರದು. ನನ್ನ ಮಗ ಆನಂದ ಈಗ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ. ಮೊಮ್ಮಗ ಶಿವ ಸದ್ಯದಲ್ಲೇ ಹೊಸ ಉದ್ಯಮ ಶುರು ಮಾಡಲಿದ್ದಾನೆ. ಈ ಚಿತ್ರ ಮಾಡಬೇಕಾದರೆ ನಾನು ನಿರ್ದೇಶಕರಿಗೆ ಹೇಳಿದ್ದೆ. ನನ್ನ‌ ಜೀವನ ಹೇಗಿತ್ತೊ ಹಾಗೆ ತೋರಿಸಬೇಕು. ಬೇರೆ ಏನು ಸೇರಿಸಬಾರದು ಅಂತ. ನಾನು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದನೋ, ನಾಯಕ ನಿಹಾಲ್ ಹಾಗೆ ಕಾಣುತ್ತಾರೆ. ಆ ಮೀಸೆ, ಬಣ್ಣಬಣ್ಣದ ಅಂಗಿಗಳು ಎಲ್ಲವು.. ಆ ವಯಸ್ಸಿನಲ್ಲಿ ನಾನು ಹಾಗೆ ಇದೆ. ನಾಯಕಿ ಸಿರಿ ಪ್ರಹ್ಲಾದ್ ಕೂಡ ನನ್ನ ಹೆಂಡತಿಯನ್ನೇ ಹೋಲುತ್ತಾರೆ. ಈ ಚಿತ್ರ ಯುವಕರಿಗೆ ಸ್ಪೂರ್ತಿಯಾಗಲಿ. ಡಿಸೆಂಬರ್ ಒಂಭತ್ತರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು ವಿಜಯ ಸಂಕೇಶ್ವರ.

ಶರಣ್, ಹರ್ಷಿಕಾ ಪೂಣಚ್ಛ ಅತಿಥಿಗಳಾಗಿ ಆಗಮಿಸಿ‌ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರ ಸಾಗಿ ಬಂದ ಬಗ್ಗೆ ನಿರ್ದೇಶಕಿ ರಿಶಿಕಾ ಶರ್ಮ ಮಾಹಿತಿ ನೀಡಿದರು. ಹಾಡುಗಳ ಬಗ್ಗೆ ಗೋಪಿ ಸುಂದರ್, ಅಭಿನಯದ ಕುರಿತು ನಾಯಕ ನಿಹಾಲ್, ನಾಯಕಿ ಸಿರಿ ಪ್ರಹ್ಲಾದ್, ಭರತ್ ಬೋಪ್ಪಣ್ಣ, ಅರ್ಚನಾ ಕೊಟ್ಟಿಗೆ, ರಾಜೇಶ್ ನಟರಂಗ ಮಾತನಾಡಿದರು. ಬಹುಕೋಟಿ ವೆಚ್ಚದ ಈ ಸಿನಿಮಾದಲ್ಲಿ ಅನಂತನಾಗ್, ರವಿಚಂದ್ರನ್, ವಿನಯಾಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

-masthmagaa.com

Contact Us for Advertisement

Leave a Reply