ಸಣ್ಣ ನಟಿಯ ಮನೆಯಲ್ಲಿ ಚಪ್ಪಲಿ ಇಲ್ಲದೆ ದರ್ಶನ್​ನನ್ನು ನಿಲ್ಲಿಸಿದ್ರು: ನಟ ಜಗ್ಗೇಶ್​

masthmagaa.com:

ನಟ ಜಗ್ಗೇಶ್​ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಇವತ್ತು ಮತ್ತೆ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಸ್ಪಷ್ಟನೆ ಕೊಡೋ ಪ್ರಯತ್ನ ಮಾಡಿದ್ದಾರೆ. ಹಿಂದೆ ದರ್ಶನ್​ಗೆ ಕಷ್ಟ ಬಂದಾಗ ನಾನೇ ಅವರ ಜೊತೆ ನಿಂತಿದ್ದು. ಅದನ್ನೆಲ್ಲಾ ಈಗ ಮರೆತಿದ್ದಾರೆ. ತಮ್ಮ ಅಭಿಮಾನಿಗಳು ಮೊನ್ನೆ ನನಗೆ ಅಡ್ಡಹಾಕಿ ಗಲಾಟೆ ಮಾಡಿದಾಗ ದರ್ಶನ್​ ಕಾಲ್ ಮಾಡಬೇಕಿತ್ತು, ಆದ್ರೆ ಮಾಡಲಿಲ್ಲ. ಅಲ್ಲದೆ ರಾಮನಗರದ ಸರ್ಕಲ್​ನಲ್ಲೇ ನನಗೆ ಅಡ್ಡಹಾಕಿ ದೊಡ್ಡ ಮಟ್ಟದಲ್ಲಿ ಅವಮಾನ ಮಾಡುವ ಹುನ್ನಾರ ನಡೆಸಲಾಗಿತ್ತು ಅಂತೆಲ್ಲಾ ಹೇಳಿದ್ದಾರೆ.

ನಟ ಜಗ್ಗೇಶ್ ಹೇಳಿದ್ದೇನು..?

ದರ್ಶನ್​ ನಮ್ಮ ಹುಡುಗ. ಅವನನ್ನ ಇವತ್ತು, ಮುಂದೆ, ಯಾವತ್ತೂ ಕೂಡ ಪ್ರೀತಿಸ್ತೀನಿ. ನನ್ನ ಒಂದು ಪ್ರಶ್ನೆಗೆ ದರ್ಶನ್ ಅಭಿಮಾನಿಗಳು ಎದೆ ಮುಟ್ಟಿಕೊಂಡು ಉತ್ತರ ಕೊಡಲಿ. ಒಂದಿನ ಪೊಲೀಸರು ದರ್ಶನ್​ಗೆ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಸಣ್ಣ ನಟಿಯೊಬ್ಬರ ಮನೆಯಲ್ಲಿ ನಿಲ್ಲಿಸಿದ್ರು, ಕೂಡಿ ಹಾಕಿದ್ರು. ಆಗ ದರ್ಶನ್ ಪರವಾಗಿ ನಿಂತಿದ್ದು ನಾನು. ಹೋಂ ಮಿನಿಸ್ಟರ್​, ಡಿಸಿಪಿಗೆ ಕಾಲ್​ ಮಾಡಿ ದರ್ಶನ್​ ಬಿಡುಗಡೆಗೆ ಮಾಡುವಂತೆ ಹೇಳಿದ್ದೆ. ನಾನ್ ಆಗ ಮಾಡಿದ್ದು ಯಾರಿಗೂ ನೆನಪಿಲ್ವಾ? ದರ್ಶನ್ ಕನ್ನಡದ ರಜನಿಕಾಂತ್, ಸಲ್ಮಾನ್​ ಖಾನ್ ಅಂತ ಕರೆದಿದ್ದೆ. ಅವತ್ತು ಯಾರೂ ಕೇಳಲಿಲ್ಲ. ಆದ್ರೆ ದರ್ಶನ್ ಅಭಿಮಾನಿಗಳು ಮೊನ್ನೆ ಗಲಾಟೆ ಮಾಡಿದಾಗ ದರ್ಶನ್ ಅವರಿಗೆ ಕಾಲ್ ಮಾಡಿ ಏನಂತ ಕೇಳಬೇಕಿತ್ತು. ನನಗೂ ಕಾಲ್ ಮಾಡಬೇಕಿತ್ತು. ನನ್ ಹೆಂಡ್ತಿ ನಂಗೆ ಕೇಳ್ತಿದ್ದಾಳೆ ಯಾಕೆ ದರ್ಶನ್ ಕಾಲ್​ ಮಾಡಿಲ್ವಾ ಅಂತ. ದರ್ಶನ್​ ಅಪಘಾತದಲ್ಲಿ ಗಾಯಗೊಂಡಾಗ ನಾನು ಅವನಿಗೆ ಕಾಲ್ ಮಾಡಿ ವಿಚಾರಿಸಿದ್ದೆ. ನನ್ನ ದೌರ್ಭಾಗ್ಯ ಮೊನ್ನೆ ನಡೆದ ಘಟನೆ ಬಳಿಕ ದರ್ಶನ್ ಕಾಲ್ ಮಾಡಿಲ್ಲ. ದರ್ಶನ್​ ಜೊತೆ ದಿನನಿತ್ಯ ಇರೋರೆ ಮೊನ್ನೆ ಬಂದು ಗಲಾಟೆ ಮಾಡಿದ್ದು. ನನ್ನ ಚಲನವಲನದ ಮೇಲೆ ಕಣ್ಣಿಡಲಾಗ್ತಿತ್ತು. ಈ ಹುನ್ನಾರ ರಾಮನಗರದ ಸರ್ಕಲ್​ನಲ್ಲಿ ನಡೆಯಬೇಕಿತ್ತು. ರಾಮನಗರ ಸರ್ಕಲ್​ನಲ್ಲಿ ಹೀಗೆ ಅಡ್ಡಹಾಕಿ ಗಲಾಟೆ ಮಾಡಿದ್ರೆ ಟ್ರಾಫಿಕ್​ ಜಾಮ್ ಆಗಿ ಎಲ್ಲರಿಗೂ ವಿಚಾರ ಗೊತ್ತಾಗುತ್ತೆ. ಎಲ್ಲರ ಮುಂದೆ ಜಗ್ಗೇಶ್ ಮಾನ ಹರಾಜು ಹಾಕಿದಂತೆ ಆಗುತ್ತೆ ಅಂತ ಹುನ್ನಾರ ನಡೆಸಿದ್ರು.

-masthmagaa.com

Contact Us for Advertisement

Leave a Reply