masthmagaa.com:
ಇವತ್ತು ರಾಜ್ಯ ಬಜೆಟ್ ಮಂಡನೆಯಾಗಿದೆ. ಸಿಎಂ ಯಡಿಯೂರಪ್ಪನವರು 8ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ನಲ್ಲಿ ಯಾವುದೇ ಹೊಸ ತೆರಿಗೆಯನ್ನ ಹಾಕದಿರೋದು ಜನಸಾಮಾನ್ಯರಿಗೆ ನೆಮ್ಮದಿಯ ವಿಚಾರ. ಆದ್ರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸ್ವಲ್ಪ ಕಮ್ಮಿ ಮಾಡಬಹುದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ಅದನ್ನ ಹಾಗೇ ಮುಂದುವರಿಸಲಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳನ್ನ, ಎಲ್ಲಾ ಜಾತಿ ಧರ್ಮಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಸಿಎಂ ಯಡಿಯೂರಪ್ಪ. ಹಾಗಿದ್ರೆ 2.46 ಲಕ್ಷ ಕೋಟಿ ಮೊತ್ತದ ಬಜೆಟ್ನಲ್ಲಿ ಏನೇನಿದೆ ಅನ್ನೋದರ ಮುಖ್ಯಾಂಶಗಳು ಇಲ್ಲಿವೆ ನೋಡಿ…
ಕೃಷಿ ಕ್ಷೇತ್ರಕ್ಕೆ ಏನು..?
– ಸಾವಯವ ಕೃಷಿ ಉತ್ತೇಜನಕ್ಕೆ ₹500 ಕೋಟಿ ಮೀಸಲಿಡಲಾಗಿದೆ
– ಫಸಲ್ ಬಿಮಾ ಯೋಜನೆಗೆ ₹900 ಕೋಟಿ ಮೀಸಲು
– ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಗೆ ₹831 ಕೋಟಿ ಅನುದಾನ
– ಕೃಷಿ ವಿವಿಗಳಲ್ಲಿ ರೈತರ ಮಕ್ಕಳ ಮೀಸಲಾತಿ ಶೇ.50ಕ್ಕೆ ಹೆಚ್ಚಿಸಲಾಗಿದೆ
– ₹150 ಕೋಟಿ ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣ ಮಾಡಲಾಗುತ್ತೆ.
– ರಾಮನಗರದಲ್ಲಿ ₹25 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ನಿರ್ಮಾಣ
– 5,500 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ₹198 ಕೋಟಿ ಅನುದಾನ
– ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ₹50 ಕೋಟಿ ವೆಚ್ಚದ ಹೂವಿನ ಮಾರುಕಟ್ಟೆ ನಿರ್ಮಾಣ
– ಪ್ರತಿ ಜಿಲ್ಲೆಯಲ್ಲಿಯೂ ಗೋಶಾಲೆ ನಿರ್ಮಾಣವಾಗಲಿದೆ
– ಅಡಕೆಯ ಹಳದಿ ಎಲೆ ರೋಗ ತಡೆ ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ ₹25 ಕೋಟಿ ಮೀಸಲು
– ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ₹62 ಕೋಟಿ ಅನುದಾನ
– ಮೀನು ಮಾರಾಟ ಉತ್ತೇಜನಕ್ಕೆ ₹30 ಕೋಟಿ ವೆಚ್ಚದಲ್ಲಿ ಮತ್ಸ್ಯ ದರ್ಶಿನಿ ಕೇಂದ್ರಗಳ ಸ್ಥಾಪನೆ
– ಕಳಸಾ ಬಂಡೂರಿ ನೀರಿನ ಬಳಕೆಗೆ ಒಟ್ಟು ₹1,677 ಕೋಟಿ ರೂ. ಅನುದಾನ
ಶಿಕ್ಷಣ ಕ್ಷೇತ್ರಕ್ಕೆ ಏನು..?
– ಶಿವಮೊಗ್ಗದ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ
– 50 ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ₹100 ಕೋಟಿ ಮೀಸಲಿಡಲಾಗಿದೆ
– ಶಾಲಾ ಶೌಚಾಲಯಗಳ ಉನ್ನತೀಕರಣ ಮಾಡಲಾಗುತ್ತೆ
– ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ಮೂಲಸೌಕರ್ಯಕ್ಕೆ ₹150 ಕೋಟಿ ಮೀಸಲಿಡಲಾಗಿದೆ
– ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಕಂಪ್ಯೂಟರ್ ಲ್ಯಾಬ್ ಸ್ಥಾಪನೆಯಾಗಲಿದೆ
– ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತೆ
– ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ ರೂಂ ಸ್ಥಾಪನೆಯಾಗಲಿದೆ
– ಆಯ್ದ ಮಹಾನಗರ ಪಾಲಿಕೆಗಳಲ್ಲಿ ಸಂಜೆ ಕಾಲೇಜು ಆರಂಭವಾಗಲಿದೆ
ಆರೋಗ್ಯ ಕ್ಷೇತ್ರಕ್ಕೆ ಏನು..?
– 19 ಜಿಲ್ಲಾಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯದ ಮತ್ತು 100 ಆಸ್ಪತ್ರೆಗಳಲ್ಲಿ 6 ಹಾಸಿಗೆ ಸಾಮರ್ಥ್ಯದ ಐಸಿಯು ಸ್ಥಾಪನೆಗೆ ₹60 ಕೋಟಿ ಮೀಸಲಿಡಲಾಗಿದೆ
– 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಮಾದರಿ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುವುದು
– ಅನುವಂಶೀಯ ಕಾಯಿಲೆಗಳ ಪತ್ತೆಗೆ ಬಳ್ಳಾರಿ, ಬೆಂಗಳೂರಲ್ಲಿ ₹10 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣವಾಗಲಿದೆ
– ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿಕೊಳ್ಳೋದನ್ನ ಹೆಚ್ಚಿಸಲು ₹10 ಕೋಟಿ ಮೊತ್ತದ ‘ಚಿಗುರು’ ಕಾರ್ಯಕ್ರಮ ಪ್ರಾರಂಭವಾಗಲಿದೆ
– ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು
– ಶಿವಮೊಗ್ಗ, ಮೈಸೂರಲ್ಲಿ ₹100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ನಿರ್ಮಾಣವಾಗಲಿದೆ
– ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಆರಂಭದಲ್ಲೇ ಪತ್ತೆಹಚ್ಚಲು ₹11 ಕೋಟಿ ವೆಚ್ಚದಲ್ಲಿ ಸಂಚಾರಿ ಪ್ರಯೋಗಾಲಯ ಸ್ಥಾಪನೆಯಾಗಲಿದೆ
– ದಾವಣಗೆರೆಯಲ್ಲಿ ₹20 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಸ್ಥಾಪನೆಯಾಗಲಿದೆ
– ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ
– ಹಾಸನ ಮತ್ತು ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ 100 ಸೀಟುಗಳ ಹೆಚ್ಚಳಮಾಡಲಾಗುತ್ತೆ
– ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯನ್ನ ಮಾನಸಿಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯಾಗಿ ಮಾರ್ಪಾಡು ಮಾಡಲಾಗುತ್ತೆ. ಇದಕ್ಕೆ ₹75 ಕೋಟಿ ಮೀಸಲು ಇಡಲಾಗಿದೆ
– ಶೇ.75ಕ್ಕಿಂತ ಜಾಸ್ತಿ ಮನೋವೈಕಲ್ಯ ಹೊಂದಿದ ಬುದ್ಧಿಮಾಂದ್ಯರಿಗೆ ಮಾಸಾಶನದ ಮೊತ್ತ ₹1,400ರಿಂದ ₹2,000ಕ್ಕೆ ಏರಿಕೆ ಮಾಡಲಾಗುತ್ತೆ
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಕ್ಷೇತ್ರಕ್ಕೆ ಏನು..?
– ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹50 ಕೋಟಿ ವೆಚ್ಚದಲ್ಲಿ 50 ಹಾಸ್ಟೆಲ್ಗಳ ನಿರ್ಮಾಣ ಮಾಡಲಾಗುತ್ತೆ
– ಪರಿಶಿಷ್ಟ ಪಂಗಡದ ಶಾಲೆಗಳನ್ನ ‘ವಾಲ್ಮೀಕಿ ಆಶ್ರಮ’ ಎಂದು ಮರುನಾಮಕರಣ ಮಾಡಲಾಗುತ್ತೆ
– ಬೆಳಗಾವಿಯ ನಿಪ್ಪಾಣಿಯಲ್ಲಿ ಕೋಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್ ಮತ್ತು ಚಿತ್ರದುರ್ಗದಲ್ಲಿ ಪಾದರಕ್ಷೆ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ
– ಹಿಂದುಗಳಿದ ವರ್ಗಗಳ ವಿವಿಧ ನಿಗಮಗಳ ಅಭಿವೃದ್ಧಿಗೆ ₹500 ಕೋಟಿ ಅನುದಾನ ಮೀಸಲಿಡಲಾಗಿದೆ
– ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ₹500 ಕೋಟಿ ಅನುದಾನ, ನೀಡಲಾಗುತ್ಅತೆ ಅದರಲ್ಲಿ 100 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ
– ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ. ಇದಕ್ಕೆ ₹500 ಕೋಟಿ ಖರ್ಚು ಮಾಡಲು ಯೋಜನೆ ಸಿದ್ದಪಡಿಸಲಾಗುಇತ್ತೆ
– ಅಲ್ಪಸಂಖ್ಯಾತರ ಏಳಿಗೆಗಾಗಿ ಒಟ್ಟು ₹1,500 ಕೋಟಿ ಮೀಸಲು ಇಡಲಾಗಿದೆ
– ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ₹200 ಕೋಟಿ ಮೀಸಲು ಇಡಲಾಗಿದೆ
– 400 ಉರ್ದು ಶಾಲೆಗಳಲ್ಲಿ ಇಂಗ್ಲಿಷ್ ಕೂಡ ಆರಂಭ ಮಾಡಲಾಗುತ್ತೆ
– ಜೈನ ಪುಣ್ಯಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹಂತ ಹಂತವಾಗಿ ₹50 ಕೋಟಿ ಮೀಸಲಿಡಲಾಗುತ್ತೆ ಈ ಬಾರಿ ₹20 ಕೋಟಿ ಮೀಸಲಿಡಲಾಗಿದೆ
– ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗೆ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತೆ
– ಗ್ರಾಮೀಣ ಪ್ರದೇಶದ 5,622 ಗ್ರಂಥಾಲಯಗಳ ಉನ್ನತೀಕರಣ ಮಾಡಲಾಗುತ್ತೆ
– ಪ್ರದೇಶಾಭಿವೃದ್ಧಿ ಮಂಡಳಿಗೆ ₹1,500 ಕೋಟಿ ಅನುದಾನ ಮೀಸಲಿಡಲಾಗುತ್ನೀತೆ ಡಲಾಗುತ್ತೆ
– ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ₹3,000 ಕೋಟಿ ಅನುದಾನ ಮೀಸಲಿಡಲಾಗುತ್ತೆ
– ಮಲೆನಾಡು, ಕರಾವಳಿ ಭಾಗದಲ್ಲಿ ರಸ್ತೆ ಸಂಪರ್ಕವಿಲ್ಲದಕಡೆ ಕಾಲು ಸಂಕ ನಿರ್ಮಿಸೋಕೆ ₹100 ಕೋಟಿ ವೆಚ್ಚದ ಗ್ರಾಮಬಂಧು ಸೇತುವೆ ಯೋಜನೆ ಪ್ರಾರಂಭವಾಗಲಿದೆ
– ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಸೌಲಭ್ಯ ಕಲ್ಪಿಸಲು ₹900 ಕೋಟಿ ಅನುದಾನ ಮೀಸಲಿಡಲಾಗಿದೆ
– ₹100 ಕೋಟಿಗಿಂತ ಹೆಚ್ಚು ಮೊತ್ತದ ಯೋಜನೆಗಳ ಮೌಲ್ಯಮಾಪನ ಕಡ್ಡಾಯ ಮಾಡಲಾಗಿದೆ
ಸಾರಿಗೆ ಕ್ಷೇತ್ರಕ್ಕೆ ಏನು..?
– ರಾಯಚೂರು ನಗರದಲ್ಲಿ ಸುಗಮ ಸಂಚಾರಕ್ಕಾಗಿ ರಿಂಗ್ ರಸ್ತೆ ನಿರ್ಮಾಣವಾಗಲಿದೆ
– ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಪ್ರಾಯೋಗಿಕವಾಗಿ ₹18 ಕೋಟಿ ಅನುದಾನ
– ಕೇಂದ್ರದ ಜೊತೆ 50:50 ವೆಚ್ಚದಲ್ಲಿ 1,173 ಕಿಲೋ ಮೀಟರ್ ಉದ್ದದ ರೈಲ್ವೆ ಮಾರ್ಗ. 7 ಹೊಸ ರೈಲ್ವೆ ಯೋಜನೆಗಳ ಆರಂಭ. ಇದಕ್ಕೆ ರಾಜ್ಯದಿಂದ ₹3,991 ಕೋಟಿ ಅನುದಾನ
– ದಿವಂಗತ ಸುರೇಶ್ ಅಂಗಡಿ ಆಸೆಯಂತೆ ಧಾರವಾಡ-ಕಿತ್ತೂರು-ಬೆಳಗಾವಿ ನಡುವೆ ₹927 ಕೋಟಿ ವೆಚ್ಚದಲ್ಲಿ 73 ಕಿಲೋ ಮೀಟರ್ ಉದ್ದದ ಹೊಸ ರೈಲು ಮಾರ್ಗ
– ಹಾಸನ ವಿಮಾನ ನಿಲ್ದಾಣ ಕಾಮಗಾರಿ ₹175 ಕೋಟಿ ವೆಚ್ಚದಲ್ಲಿ ಆರಂಭ
– ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ
ಕೈಗಾರಿಕೆ & ಇಂಧನ ಕ್ಷೇತ್ರಕ್ಕೆ ಏನು..?
– ಪ್ಲಾಸ್ಟಿಕ್ ಮತ್ತು ಪೆಟ್ರೋಕೆಮಿಕಲ್ ಕೈಗಾರಿಕೆ ಅಭಿವೃದ್ಧಿಗೆ ಮಂಗಳೂರಿನ ಗಂಜಿಮಠದಲ್ಲಿ ಕೇಂದ್ರದ ಸಹಯೋಗದಲ್ಲಿ ₹66 ಕೋಟಿ ವೆಚ್ಚದ ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿ
– ಕೈಮಗ್ಗ ನೇಕಾರರಿಗೆ 2,000 ರೂಗಳ ಆರ್ಥಿಕ ನೆರವು ನೀಡುವ ನೇಕಾರ್ ಸಮ್ಮಾನ್ ಯೋಜನೆ ಮುಂದುವರಿಕೆ
– ಬಾಗಲಕೋಟೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್
– ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು ಖಾಸಗಿ ಸಹಭಾಗಿತ್ವದಲ್ಲಿ 1,000 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ
– ನಿರಂತರ ವಿದ್ಯುತ್ ಪೂರೈಕೆಗಾಗಿ ₹4,000 ಕೋಟಿ ವೆಚ್ಚದಲ್ಲಿ ಪಂಪ್ಡ್ ಹೈಡ್ರೋ ಸ್ಟೋರೇಜ್ ಪ್ಲಾಂಟ್ ಸ್ಥಾಪನೆ
ಬೆಂಗಳೂರಿಗೆ ಏನೇನು..?
– ಬೆಂಗಳೂರು ನಗರ ಅಭಿವೃದ್ಧಿಗೆ ಒಟ್ಟು ₹7,795 ಕೋಟಿ ಮೀಸಲು
– ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ನೀರು ತುಂಬಿಸಲು ₹500 ಕೋಟಿ ಮೊತ್ತದ ಯೋಜನೆ
– ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಭವನ ಸ್ಥಾಪನೆ
– ಬೆಂಗಳೂರು ಉತ್ತರ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
– 45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್ಗಳನ್ನ ಖರೀದಿಸುವವರಿಗೆ ಮುದ್ರಾಂಕ ಶುಲ್ಕ ಕಡಿತ
– ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ₹20 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ
ಮಹಿಳೆಯರಿಗೆ ಏನು..?
– ಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಲ್ಲಿ ನಗರಾದ್ಯಂತ 7,500 ಸಿಸಿ ಕ್ಯಾಮರಾಗಳ ಅಳವಡಿಕೆ
– ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದ ಬಸ್ ಪಾಸ್
– ಆಸ್ಪತ್ರೆ, ವೈದ್ಯಕೀಯ, ಸೇವಾ ವಲಯದಲ್ಲಿರೋ ಮಹಿಳೆಯರಿಗೆ ಶೇ.4ರಷ್ಟು ಬಡ್ಡಿದರದಲ್ಲಿ 2 ಕೋಟಿ ರೂಪಾಯಿವರೆಗೆ ಸಾಲ
– ಹಪ್ಪಳ, ಉಪ್ಪಿನಕಾಯಿ, ಮಸಾಲೆ ಪದಾರ್ಥ ಸೇರಿದಂತೆ ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಮಾರುಕಟ್ಟೆ ನೆರವು
ಸಂಸ್ಕೃತಿ, ಪರಂಪರೆ ಕ್ಷೇತ್ರಕ್ಕೆ ಏನು..?
– ಅಯೋಧ್ಯೆ ರಾಮಮಂದಿರಕ್ಕೆ ಹೋಗುವ ಕನ್ನಡಿಗರು ಉಳಿದುಕೊಳ್ಳಲು ಯಾತ್ರಿ ನಿವಾಸ ನಿರ್ಮಾಣಕ್ಕೆ ₹10 ಕೋಟಿ ಮೀಸಲು
– ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟಾರೆ ₹50 ಕೋಟಿ ಅನುದಾನ
– ಬಸವಣ್ಣನವರ ಜನ್ಮಸ್ಥಳ ಇಂಗಳೇಶ್ವರ ಗ್ರಾಮಾಭಿವೃದ್ಧಿಗೆ ₹5 ಕೋಟಿ ಅನುದಾನ
– ಮಂಡ್ಯದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಆದಿಚುಂಚನಗಿರಿನಾಥ ಪಾರಂಪರಿಕ ಕೇಂದ್ರ ಸ್ಥಾಪನೆಗೆ ₹10 ಕೋಟಿ ಮೀಸಲು
– ಎಸ್.ಎಲ್ ಭೈರಪ್ಪನವರ ಪರ್ವ ನಾಟಕದ ಪ್ರದರ್ಶನಕ್ಕೆ ₹1 ಕೋಟಿ ಮೀಸಲು
– ಮೈಸೂರಿನ ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ
ಇನ್ನು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸುವಾಗ ಕಾಂಗ್ರೆಸ್ನವರು ಸಭಾತ್ಯಾಗ ಮಾಡಿ ಹೊರ ನಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ನಾವು 130ರಿಂದ 135 ಸೀಟು ಗೆಲ್ತೀವಿ. ಸಿದ್ದರಾಮಯ್ಯರನ್ನ ವಿಪಕ್ಷ ಸ್ಥಾನದಲ್ಲೇ ಕೂರಿಸ್ತೀವಿ. ಇಲ್ಲ ಅಂದ್ರೆ ನನ್ನನ್ನ ಯಡಿಯೂರಪ್ಪ ಅಂತ ಕರೀಲೇ ಬೇಡಿ ಅಂತ ಹೇಳಿದ್ರು. ಇನ್ನು ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ಅನ್ನ ಟೊಳ್ಳು ಬಜೆಟ್ ಅಂತ ಕರೆದಿದ್ದಾರೆ.
-masthmagaa.com
Contact Us for Advertisement