masthmagaa.com:
ಅಯೋಧ್ಯ ರಾಮಭೂಮಿಯಂತೆ ಶ್ರೀಕೃಷ್ಣರ ಜನ್ಮಸ್ಥಾನದ ಬಗ್ಗೆ ಕೂಡ ವಿವಾದ ಇದೆ. ಇದೀಗ ಈ ವಿವಾದಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿರುವ ವಿವಾದಿತ ಶಾಹಿ ಈದ್ಗಾ ಮಸೀದಿಯನ್ನ ಸಮೀಕ್ಷೆ ಮಾಡಿ ಅಂತ ಮಥುರಾದ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜನವರಿ 2ರಿಂದ ಸರ್ವೆ ಮಾಡಿ ಜನವರಿ 20ಕ್ಕೆ ವರದಿ ಸಲ್ಲಿಸ್ಬೇಕು ಅಂತ ಕೋರ್ಟ್ ಹೇಳಿದೆ. ಮಥುರಾದಲ್ಲಿರೋ ಶ್ರೀಕೃಷ್ಣ ಜನ್ಮಭೂಮಿಯನ್ನ ಅತಿಕ್ರಮಣ ಮಾಡಿ ಮಸೀದಿ ನಿರ್ಮಿಸಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಶುದ್ಧೀಕರಣ ವಿಧಿಗಳನ್ನ ನೆರವೇರಿಸೋಕೆ ಅವಕಾಶ ನೀಡ್ಬೇಕು ಅಂತ ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಶಾಹಿ ಈದ್ಗಾ ಮಸೀದಿ ಇರೋ ಸ್ಥಳದಲ್ಲಿಯೇ ಶ್ರೀಕೃಷ್ಣರ ಪುರಾತನ ದೇಗುಲವೂ ಇತ್ತು. ಶ್ರೀಕೃಷ್ಣರ ಜನ್ಮಭೂಮಿಯ ಗರ್ಭ ಗುಡಿ ಮೇಲೆಯೇ ಮಸೀದಿಯನ್ನ ನಿರ್ಮಿಸಲಾಗಿದೆ. ಹಾಗಾಗಿ ಮಸೀದಿಗೆ ಪ್ರವೇಶಿಸಿ ಅಭಿಷೇಕ ನಡೆಸೋಕೆ ಅವಕಾಶ ನೀಡ್ಬೇಕು ಅಂತ ಹಿಂದೂ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ವಿನಂತಿಸಿದ್ರು. ಅಂದಹಾಗೆ ಶಾಹಿ ಈದ್ಗಾ ಮಸೀದಿಯನ್ನ 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯ ಮೇಲೆ ನಿರ್ಮಿಸಲಾಗಿದೆ ಅನ್ನೋದು ಆರೋಪ. 17ನೇ ಶತಮಾನದಲ್ಲಿ ನಿರ್ಮಾಣವಾಗಿರೋ ಶಾಹಿ ಈದ್ಗಾ ಮಸೀದಿಯನ್ನು ಈಗ ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ ತೆಗೆದುಹಾಕಬೇಕು ಅಂತ ಒತ್ತಾಯಿಸಿ ಹಿಂದೂ ಸಂಘಟನೆಗಳು ತುಂಬಾ ಹಿಂದಿನಿಂದಲೂ ಪ್ರತಿಭಟನೆ ಮಾಡ್ತಾಯಿವೆ. ಅನೇಕ ಬಾರಿ ಅರ್ಜಿಗಳನ್ನ ಸಹ ಸಲ್ಲಿಕೆ ಮಾಡಲಾಗಿದೆ. ಆದ್ರೆ 1991ರ ಪೂಜಾ ಸ್ಥಳಗಳ ಕಾಯ್ದೆಯಡಿಯಲ್ಲಿ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಅಂತ ಮಥುರಾದ ಸಿವಿಲ್ ನ್ಯಾಯಾಲಯ ಈ ಹಿಂದೆ ಪ್ರಕರಣವನ್ನು ವಜಾಗೊಳಿಸಿತ್ತು. ಆದ್ರೆ 2019 ರಲ್ಲಿ ರಾಮಮಂದಿರ ಕೇಸ್ನಲ್ಲಿ ಈ ಕಾಯ್ದೆ ಅನ್ವಯ ಆಗಲಿಲ್ಲ. ಸ್ಥಳವನ್ನ ರಾಮಮಂದಿರ ನಿರ್ಮಾಣಕ್ಕೆ ಕೊಟ್ಟು ಮಸೀದಿ ನಿರ್ಮಾಣಕ್ಕೆ ಬೇರೆ ಕಡೆ ಜಾಗ ಗೊತ್ತುಪಡಿಸಿತ್ತು. ಹೀಗಾಗಿ ಶ್ರೀಕೃಷ್ಣರ ಜನ್ಮಸ್ಥಾನದ ವಿಚಾರದಲ್ಲೂ ಸಹ ಇದೇ ರೀತಿ ಆಗಬೇಕು ಅಂತೇಳಿ ಹಿಂದೂಪರ ಸಂಘಟನೆಗಳು ಮತ್ತೆ ಕೋರ್ಟ್ ಮೊರೆ ಹೋಗಿದ್ವು. ಈಗ ಮಥುರಾ ನ್ಯಾಯಾಲಯದಿಂದ ಸರ್ವೇಗೆ ಆದೇಶ ನೀಡಲಾಗಿದೆ.
-masthmagaa.com
Contact Us for Advertisement