masthmagaa.com:
ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಇಂದು ವೈಭವದಿಂದ ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೇ ಇನ್ನಿತರ ಜನಪ್ರತಿನಿಧಿಗಳು ಇದ್ರು. ಬಳಿಕ ಕನ್ನಡದಲ್ಲೇ ಮಾತು ಆರಂಭಿಸಿದ ರಾಷ್ಟ್ರಪತಿ, ʻದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದು ಆದಿಶಕ್ತಿಯ ಸ್ಥಾನ. ಅಧ್ಯಾತ್ಮಿಕವಾಗಿ ಉನ್ನತ ಸ್ಥಾನ ಪಡೆದಿರುವ ದೇವಿಯ ಸ್ಥಳ ಇದು. ದೇವಿಯು ಶಕ್ತಿಸ್ವರೂಪಳೂ ಹೌದು, ತಾಯಿ ಸ್ವರೂಪಳೂ ಹೌದು. ದಸರಾ ಸ್ತ್ರೀಶಕ್ತಿಯ ಆರಾಧನೆ ಮಾಡುವ ಹಬ್ಬ. ಕರ್ನಾಟಕ ಕಿತ್ತೂರು ಚೆನ್ನಮ್ಮಾ, ಓಬವ್ವರಂಥ ಹೋರಾಟಗಾರ್ತಿಯರು ಇದ್ದ ನಾಡು. ಕರ್ನಾಟಕದಲ್ಲಿ ಶಾಂತಿ ನೆಲೆಸಲಿ ಅಂತ ಹಾರೈಸಿದ್ದಾರೆ. ಇನ್ನು ಈ ವೇಳೆ ದ್ರೌಪದಿ ಮುರ್ಮು ಮೈಸೂರಿನಲ್ಲೇ ನೇಯ್ದಿದ್ದ ರೇಷ್ಮೆ ಸೀರೆಯನ್ನ ಉಟ್ಟಿದ್ದು ವಿಶೇಷವಾಗಿ ಕಂಡು ಬಂದಿತ್ತು. ನಂತರ ಹುಬ್ಬಳ್ಳಿಗೆ ತೆರಳಿದ ರಾಷ್ಟ್ರಪತಿ ಅಲ್ಲಿ ಪೌರ ಸನ್ಮಾನ ಸ್ವೀಕರಿಸಿದ್ರು. ಇನ್ನು ರಾಷ್ಟ್ರಪತಿ ಆಗಮನದ ಅಂಗವಾಗಿ ಧಾರವಾಡದಲ್ಲಿ ಪ್ಲೆಕ್ಸ್ ಹಾಕಲಾಗಿತ್ತು. ಈ ವೇಳೆ ದ್ರೌಪದಿ ಮುರ್ಮು ‘ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ’ ಅಂತ ಹಾಕಲಾಗಿತ್ತು. ಶಾಸಕ ಅರವಿಂದ ಬೆಲ್ಲದ್ ಸ್ವಾಗತ ಕೋರುವಂತೆ ಇರೋಬ್ಯಾನರ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನ ಈ ರೀತಿ ಉಲ್ಲೇಖ ಮಾಡಲಾಗಿದ್ದು ಟೀಕೆಗೆ ಗುರಿಯಾಗಿದೆ.
-masthmagaa.com
Contact Us for Advertisement