masthmagaa.com:
ಗುಜರಾತ್ನ ಮೊಟೆರಾದಲ್ಲಿರೋ ಸರ್ದಾರ್ ಪಟೇಲ್ ಸ್ಟೇಡಿಯಂನ ಹೆಸರನ್ನ ‘ನರೇಂದ್ರ ಮೋದಿ ಸ್ಟೇಡಿಯಂ’ ಅಂತ ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದರು. ಹೀಗಾಗಿ ಈ ಸ್ಟೇಡಿಯಂಗೆ ಮೋದಿ ಹೆಸರನ್ನೇ ಇಡಲಾಗಿದೆ. ಪ್ರಧಾನಿ ಮೋದಿ ಹೆಸರನ್ನ ಹೀಗೆ ಇಟ್ಟಿರೋದು ಬಹುಶಃ ಇದೇ ಮೊದಲು. ಅಂದ್ಹಾಗೆ ಇದು ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಹಿಂದೆ 90 ಸಾವಿರ ಸಿಟಿಂಗ್ ಕೆಪಾಸಿಟಿಯ ಆಸ್ಟ್ರೇಲಿಯಾದ ಮೆಲ್ಬರ್ನ್ಸ್ ಕ್ರಿಕೆಟ್ ಗ್ರೌಂಡ್ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.32 ಲಕ್ಷ ಪ್ರೇಕ್ಷಕರು ಕೂರಬಹುದು. ಇದನ್ನ 63 ಎಕರೆ ಪ್ರದೇಶದಲ್ಲಿ ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣವನ್ನ ನವೀಕರಣ ಮಾಡುವ ಉದ್ದೇಶದಿಂದ 2015ರಲ್ಲಿ ಮುಚ್ಚಲಾಗಿತ್ತು. ಸದ್ಯ ನವೀಕರಣಗೊಂಡಿರೋ ಈ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ (ಡೇ ನೈಟ್ ಟೆಸ್ಟ್) ನಡೀತಿದೆ. ಅಹಮದಾಬಾದ್ ಸಮೀಪದ ಮೊಟೆರಾದಲ್ಲಿ ಈ ಸ್ಟೇಡಿಯಂ ಇದೆ. ಜೊತೆಗೆ ಈ ಸ್ಟೇಡಿಯಂ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ನ ಭಾಗ ಕೂಡ ಹೌದು. ಈ ಸ್ಪೋರ್ಟ್ಸ್ ಎನ್ಕ್ಲೇವ್ಗೆ ಇವತ್ತು ಭೂಮಿ ಪೂಜೆ ನೆರವೇರಿಸಲಾಯ್ತು.
ಅಂದ್ಹಾಗೆ ನವೀಕರಣಗೊಂಡ ಈ ಸ್ಟೇಡಿಯಂ ಅನ್ನ ಇವತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮತ್ತಿತರರು ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘2018ರಲ್ಲಿ ನಾನು ಆಸ್ಟ್ರೇಲಿಯಾಗೆ ಹೋದಾಗ 90 ಸಾವಿರ ಸಿಟಿಂಗ್ ಕೆಪಾಸಿಟಿಯ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡೇ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನೋದು ನನ್ನ ಗಮನಕ್ಕೆ ಬಂತು. ಇದೀಗ 1.32 ಲಕ್ಷ ಸಿಟಿಂಗ್ ಕೆಪಾಸಿಟಿಯ ಈ ಕ್ರೀಡಾಂಗಣ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗ್ತಿರೋದಕ್ಕೆ ಹೆಮ್ಮೆ ಅನಿಸ್ತಿದೆ’ ಅಂತ ಹೇಳಿದ್ರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ ಮತ್ತು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂ ಜೊತೆಗೆ ನರನ್ಪುರದಲ್ಲಿ ಒಂದು ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನ ಕೂಡ ನಿರ್ಮಿಸಲಾಗುತ್ತೆ. ಈ ಮೂರರಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರೀಡೆಯನ್ನ ಆಯೋಜಿಸಬಹುದು. ಅಹಮದಾಬಾದ್ ಭಾರತದ ಸ್ಪೋರ್ಟ್ಸ್ ಸಿಟಿ ಆಗುತ್ತೆ. ಮೋದಿ ಗುಜರಾತ್ ಸಿಎಂ ಆಗಿದ್ದಾಗ ನನ್ನ ಸಲಹೆ ಮೇರೆಗೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷ ಸ್ಥಾನ ವಹಿಸಿಕೊಂಡ್ರು. ಇಲ್ಲಿ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕು ಅನ್ನೋದು ಮೋದಿಯವರ ಆಸೆಯಾಗಿತ್ತು. 1.32 ಲಕ್ಷ ಸಿಟಿಂಗ್ ಕೆಪಾಸಿಟಿಯ ಈ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂ ಅಂತಾನೇ ಗುರುತಿಸಲ್ಪಡುತ್ತೆ’ ಅಂತ ಹೇಳಿದ್ರು.
ಇನ್ನು ಸರ್ದಾರ್ ಪಟೇಲ್ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಅಂತ ಮರುನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಸರ್ದಾರ್ ಪಟೇಲ್ಗೆ ಮಾಡಿದ ಅವಮಾನ ಅಂತೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಯಾವತ್ತಾದ್ರೂ ಜಗತ್ತಿನ ಅತಿ ಎತ್ತರದ ಪ್ರತಿಮೆಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಗ್ಗೆ ಮಾತನಾಡಿದ್ದಾರಾ? ಯಾವತ್ತಾದ್ರೂ ಅಲ್ಲಿಗೆ ಹೋಗಿದ್ದಾರಾ?’ ಅಂತ ಪ್ರಶ್ನಿಸಿದ್ಧಾರೆ.
-masthmagaa.com
Contact Us for Advertisement