masthmagaa.com:
2018ರಲ್ಲಿ ನಡೆದ ಇಂಟೀರಿಯರ್ ಡಿಸೈನರ್ ಮತ್ತು ಆತನ ತಾಯಿಯ ಆತ್ಮಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಅರೆಸ್ಟ್ ಆಗಿದ್ದ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ನಲ್ಲಿ ಗೆಲುವು ಸಿಕ್ಕಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಅರ್ನಬ್ ಮತ್ತು ಇನ್ನಿಬ್ಬರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಮೂವರಿದಂಲೂ ತಲಾ 50 ಸಾವಿರ ರೂಪಾಯಿ ಬಾಂಡ್ ಅನ್ನು ಬರೆಸಿಕೊಂಡು ತಕ್ಷಣವೇ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಇಷ್ಟೇ ಅಲ್ಲ, ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್ಗೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೂ ಕಠಿಣ ಸಂದೇಶ ರವಾನಿಸಿದೆ. ‘ವೈಯಕ್ತಿಕ ಸ್ವಾತಂತ್ರ್ಯವನ್ನ ನಿರಾಕರಿಸಿರುವ ಪ್ರಕರಣದಲ್ಲಿ ಹೈಕೋರ್ಟ್ ಸರಿಯಾಗಿ ನಡೆದುಕೊಂಡಿಲ್ಲ. ಒಂದ್ವೇಳೆ ಇವತ್ತು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸದಿದ್ದರೆ ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ವಿನಾಶಗೊಳಿಸುವ ಹಾದಿಯಲ್ಲಿ ಹೋಗುತ್ತಿದ್ದೆವು. ಯಾರದ್ದಾದ್ರೂ ಬಾಯಿ ಮುಚ್ಚಿಸಬೇಕು ಅಂದ್ರೆ ನಮ್ಮ ರಾಜ್ಯ ಸರ್ಕಾರಗಳು ಈ ರೀತಿ ಮಾಡೋದಾ..? ನಿಮಗೆ ಇಷ್ಟ ಇಲ್ಲ ಅಂದ್ರೆ ಆ ಚಾನಲ್ ನೋಡಬೇಡಿ. ನಾನು ಕೂಡ ಆ ಚಾನಲ್ ನೋಡಲ್ಲ. ಇಂತಹ ವಿಚಾರದಲ್ಲಿ ವ್ಯಕ್ತಿಯನ್ನ ಟಾರ್ಗೆಟ್ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸಿದ್ರೆ, ಅಂಥವರಿಗೆ ಸುಪ್ರೀಂಕೋರ್ಟ್ ಇದೆ ಅನ್ನೋ ಸಂದೇಶವನ್ನ ರವಾನಿಸೋಣ’ ಅಂತ ಜಸ್ಟಿಸ್ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಸುಪ್ರೀಂಕೋರ್ಟ್ ಆದೇಶದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.
-masthmagaa.com
Contact Us for Advertisement