masthmagaa.com:
ಚಿತ್ರರಂಗದಲ್ಲೂ ಮಾದಕ ವಸ್ತುಗಳನ್ನು ಬಳಸಲಾಗುತ್ತೆ ಅಂತ ನಿನ್ನೆ ಸಂಸತ್ನಲ್ಲಿ ಹೇಳಿದ್ದ ನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್ ವಿರುದ್ಧ ಸಮಾಜವಾದಿ ಪಕ್ಷದ ಸಂಸದೆ ಮತ್ತು ಬಿಗ್ಬಿ ಅಮಿತಾಭ್ ಬಚ್ಚನ್ ಅವರ ಧರ್ಮಪತ್ನಿ ಜಯಾ ಬಚ್ಚನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ‘ನಿಮಗೆ ಅನ್ನ ನೀಡುವ ಕೈಯನ್ನೇ ಕಚ್ಚುತ್ತಿದ್ದೀರಿ’ ಅಂತ ಜಯಾ ಜರಿದಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಜಯಾ ಬಚ್ಚನ್, ‘ಕೆಲವೇ ಜನರ ಕಾರಣದಿಂದಾಗಿ ನೀವು ಇಡೀ ಚಿತ್ರರಂಗದ ಹೆಸರನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿನ್ನೆ ನಮ್ಮ ಲೋಕಸಭೆ ಸದಸ್ಯರು ಮತ್ತು ಚಿತ್ರರಂಗದವರು (ರವಿ ಕಿಶನ್) ಚಿತ್ರೋದ್ಯಮ ವಿರುದ್ಧ ಮಾತನಾಡಿದ್ದಾರೆ. ಇದು ನಿಜಕ್ಕೂ ನನಗೆ ಮುಜುಗರ ಮತ್ತು ನಾಚಿಕೆ ಉಂಟು ಮಾಡಿದೆ. ಇದೊಂಥರ ನಿಮಗೆ ಅನ್ನ ನೀಡುವ ಕೈಯನ್ನೇ ಕಚ್ಚಿದಂತೆ’ ಎಂದಿದ್ದಾರೆ.
ಜಯಾ ಬಚ್ಚನ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ರವಿ ಕಿಶನ್, ‘ಜಯಾ ಬಚ್ಚನ್ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಅಂತ ನಿರೀಕ್ಷಿಸಿದ್ದೆ. ಚಿತ್ರರಂಗದಲ್ಲಿರುವ ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳಲ್ಲ, ಆದ್ರೆ ಜಗತ್ತಿನ ಅತಿ ದೊಡ್ಡ ಫಿಲಂ ಇಂಡಸ್ಟ್ರಿಯನ್ನು ಮುಗಿಸಲು ಹೊರಟಿರುವ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ. ನಾನು ಮತ್ತು ಜಯಾ ಬಚ್ಚನ್ ಚಿತ್ರರಂಗಕ್ಕೆ ಬಂದಾಗ ಪರಿಸ್ಥಿತಿ ಈ ರೀತಿ ಇರಲಿಲ್ಲ. ಆದ್ರೀಗ ನಾವು ಚಿತ್ರರಂಗವನ್ನು ರಕ್ಷಿಸಬೇಕಿದೆ’ ಎಂದಿದ್ದಾರೆ.
ಅಂದ್ಹಾಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಬಾಲಿವುಡ್ನಲ್ಲಿ ಸಕ್ರಿಯವಾಗಿರುವ ಡ್ರಗ್ಸ್ ಜಾಲದ ಬಗ್ಗೆ ಈ ಹಿಂದೆ ನಟಿ ಕಂಗನಾ ರನಾವತ್ ಧ್ವನಿ ಎತ್ತಿದಾಗ ಯಾವುದೇ ನಟ, ನಟಿಯರು ತುಟಿಕ್ ಪಿಟಿಕ್ ಅಂದಿರಲಿಲ್ಲ. ಬಿಗ್ ಬಿ ಅಮಿತಾಭ್ ಬಚ್ಚನ್ರಿಂದ ಹಿಡಿದು ಶಾರುಖ್, ಸಲ್ಮಾನ್ ಖಾನ್ವರೆಗೆ ಯಾರೂ ಮಾತನಾಡಿರಲಿಲ್ಲ. ಇದು ಮಾದಕ ವಸ್ತು ಜಾಲದಲ್ಲಿ ದೊಡ್ಡ ದೊಡ್ಡ ನಟ, ನಟಿಯರು ಕೂಡ ಭಾಗಿಯಾಗಿದ್ದಾರಾ ಅನ್ನೋ ಅನುಮಾನ ಮೂಡಿಸಿತ್ತು.
-masthmagaa.com
Contact Us for Advertisement