masthmagaa.com:
ಸ್ಯಾಂಡಲ್ವುಡ್ ನಶಾ ಲೋಕಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆದಿತ್ಯ ಆಳ್ವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಅಡಗಿ ಕೂತಿರುವ ಮಾಹಿತಿ ಪಡೆದ ಪೊಲೀಸರು ನಿನ್ನೆಯಷ್ಟೇ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ದಾಳಿ ನಡೆಸಿದ್ದರು. ಈ ವೇಳೆ ವಿವೇಕ್ ಒಬೆರಾಯ್ ಮನೆಯವರು ವಿರೋಧ ವ್ಯಕ್ತಪಡಿಸಿದ್ರು ಅನ್ನೋ ಬಗ್ಗೆಯೂ ವರದಿಯಾಗಿತ್ತು. ಇದೀಗ ವಿವೇಕ್ ಒಬೆರಾಯ್ ಅವರ ಪತ್ನಿ ಮತ್ತು ಆದಿತ್ಯಾ ಆಳ್ವನ ಸಹೋದರಿಯಾಗಿರುವ ಪ್ರಿಯಾಂಕಾ ಆಳ್ವ ಒಬೆರಾಯ್ಗೆ ಬೆಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ನಲ್ಲಿ ಏನು ಹೇಳಲಾಗಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ.
ಇನ್ನು ನಿನ್ನೆಯ ರೇಡ್ ವೇಳೆ ಆದಿತ್ಯ ಆಳ್ವ ಒಬೆರಾಯ್ ಮನೆಯಲ್ಲಿದ್ದನಾ ಅಥವಾ ಇಲ್ವಾ ಅನ್ನೋದನ್ನ ಸಿಸಿಬಿ ಸ್ಪಷ್ಟಪಡಿಸಿಲ್ಲ. ದಾಳಿ ಬಗ್ಗೆ ನಿನ್ನೆ ಮಾತನಾಡಿದ್ದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ‘ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದಾನೆ. ಆತ ವಿವೇಕ್ ಒಬೆರಾಯ್ ಮನೆಯಲ್ಲಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ. ಹೀಗಾಗಿ ಚೆಕ್ ಮಾಡಲು ಸಿಸಿಬಿ ಪೊಲೀಸರು ವಿವೇಕ್ ಒಬೆರಾಯ್ ಮನೆಯಲ್ಲಿ ಶೋಧ ನಡೆಸಿದ್ದಾರೆ. ಇದಕ್ಕಾಗಿ ಕೋರ್ಟ್ನಿಂದ ಸರ್ಚ್ ವಾರಂಟ್ ಕೂಡ ಪಡೆದುಕೊಳ್ಳಲಾಗಿದೆ’ ಅಂತ ಹೇಳಿದ್ದರು.
ಅಂದ್ಹಾಗೆ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ. ಈತ ಸ್ಯಾಂಡಲ್ವುಡ್ ನಟ, ನಟಿಯರಿಗೆ ಡ್ರಗ್ಸ್ ಪೂರೈಸಿರುವ ಆರೋಪವಿದೆ. ಆದ್ರೆ ಆರೋಪ ಕೇಳಿ ಬಂದಾಗನಿಂದಲೂ ಈತ ಎಲ್ಲಿದ್ದಾನೆ ಅನ್ನೋದು ಗೊತ್ತಿಲ್ಲ. ಸದ್ಯ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ 15ಕ್ಕೂ ಹೆಚ್ಚು ಜನರನ್ನ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
-masthmagaa.com
Contact Us for Advertisement