masthmagaa.com:
ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಬಣವನ್ನೇ ನಿಜವಾದ ಶಿವಸೇನೆ ಅಂತ ಗುರುತಿಸಿದ ಬೆನ್ನಲ್ಲೇ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಚುನಾವಣಾ ಆಯೋಗ ಪ್ರಧಾನಿ ಮೋದಿ ಅವರ ಗುಲಾಮ. ನಮ್ಮ ಪಕ್ಷದ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನ ಕದ್ದಿದ್ದಾರೆ. ಆ ಕಳ್ಳನಿಗೆ ಅಂದ್ರೆ ಶಿಂಧೆಗೆ ನಾವು ಪಾಠ ಕಲಿಸಬೇಕಾಗಿದೆ. ಗಂಡಸರಾಗಿದ್ರೆ, ಕದ್ದಿರೊ ಬಿಲ್ಲು-ಬಾಣದಿಂದನೇ ಮುಂದೆ ಬರ್ಲಿ. ನಾವು ಟಾರ್ಚ್ನಿಂದಲೇ ಎಲೆಕ್ಶನ್ ಗೆಲ್ತೀವಿ ಅಂತ ಉದ್ಧವ್ ಠಾಕ್ರೆ ಆಕ್ರೋಶ ಭರಿತರಾಗಿದ್ದಾರೆ. ಮುಂಬೈನಲ್ಲಿರೋ ಠಾಕ್ರೆ ಅವ್ರ ಮಾತೋಶ್ರೀ ನಿವಾಸದ ಬಳಿ ಠಾಕ್ರೆ ಬಣದ ಕಾರ್ಯಕರ್ತರು ಶಿಂಧೆ ವಿರುದ್ದ ಘೋಷಣೆಗಳನ್ನ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಆಯೋಗದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರೊ ಶರದ್ ಪವಾರ್, ಒಂದ್ ಸಾರಿ ನಿರ್ಧಾರ ಕೊಟ್ರೆ, ಅದರ ಮೇಲೆ ಯಾವ ಚರ್ಚೆಯೂ ಇಲ್ಲ. ನಿರ್ಧಾರವನ್ನ ಒಪ್ಪಿ, ಪಕ್ಷಕ್ಕೆ ಹೊಸ ಚಿಹ್ನೆಯನ್ನ ತಗೊಳಿ ಅಂತ ಠಾಕ್ರೆಗೆ ಸಲಹೆ ನೀಡಿದ್ದಾರೆ. ಜೊತೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಇಂದಿರಾ ಗಾಂಧಿ ಅವ್ರಿಗೂ ಇಂಥದ್ದೇ ಪರಿಸ್ಥಿತಿ ಬಂದಿತ್ತು, ಅಂದ್ರೆ ಅವರು ಸಹ ಪಕ್ಷದ ಚಿಹ್ನೆಯನ್ನ ಕಳೆದುಕೊಂಡಿದ್ರು ಅಂತ ಹೇಳಿದ್ದಾರೆ. ಅಂದ್ಹಾಗೆ ಶಿಂಧೆ ಸಲ್ಲಿಸಿದ ಆರು ತಿಂಗಳ ಹಳೆಯ ಅರ್ಜಿಯ ಕುರಿತು ಸರ್ವಾನುಮತದ ಆದೇಶ ನೀಡಿರುವ ತ್ರಿಸದಸ್ಯ ಆಯೋಗ, ಶಾಸಕಾಂಗ ವಿಭಾಗದಲ್ಲಿ ಪಕ್ಷದ ಸಂಖ್ಯಾ ಬಲವನ್ನು ಅವಲಂಬಿಸಿ ಈ ಆದೇಶವನ್ನು ನೀಡಲಾಗಿದೆ ಅಂತ ಹೇಳಿದೆ. 55 ಶಾಸಕರಲ್ಲಿ 40 ಶಾಸಕರನ್ನ ಹಾಗೂ 18 ಲೋಕಸಭಾ ಸದಸ್ಯರಲ್ಲಿ 13 ಸದಸ್ಯರ ಬೆಂಬಲವನ್ನ ಶಿಂಧೆ ಬಣ ಹೊಂದಿದೆ. ಹೀಗಾಗಿ ಶಿಂಧೆ ಬಣವೇ ನಿಜವಾದ ಶಿವಸೇನೆ ಅಂತ ಆಯೋಗ ಹೇಳಿದೆ. ಈ ಮೂಲಕ 1966ರಲ್ಲಿ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮೇಲೆ ಠಾಕ್ರೆ ಕುಟುಂಬದ ಹಿಡಿತ ಇದೇ ಮೊದಲ ಬಾರಿಗೆ ತಪ್ಪಿದಂತಾಗಿದೆ.
-masthmagaa.com
Contact Us for Advertisement