masthmagaa.com:
ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಹಾಗೂ ಅಷ್ಟೇ ಪ್ರಭಾವಶಾಲಿ ಜಿಲ್ಲೆ ಬೆಳಗಾವಿ. ರಾಜ್ಯದ ಅತಿದೊಡ್ಡ ಜಿಲ್ಲೆ.. ಐತಿಹಾಸಿಕವಾಗಿ ತುಂಬಾ ಮಹತ್ವವಾದ ಪಡೆದ ಜಾಗ. ರಾಜಕೀಯವಾಗಿ ಕೂಡ ಘಟಾನುಘಟಿ ನಾಯಕರ ತವರು. ಬೆಂಗಳೂರನ್ನ ಬಿಟ್ರೆ ಅತಿಹೆಚ್ಚು ವಿಧಾನಸಭಾ ಕ್ಷೇತ್ರ ಇರೋ ಜಿಲ್ಲೆ ಬೆಳಗಾವಿ. ಒಂದಲ್ಲ ಎರಡಲ್ಲ ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳು ಇಲ್ಲಿ ಇದ್ದಾವೆ. ರಾಜ್ಯ ಕಾಂಗ್ರೆಸ್, ಹಾಗೂ ರಾಜ್ಯ ಬಿಜೆಪಿಯ ದೊಡ್ಡ ನಾಯಕರ ಮನೆ ಬೆಳಗಾವಿ. 2019ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಉರುಳಿಸಿ, ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಕಾರಣಕರ್ತರಾದ ರಮೇಶ್ ಜಾರಕಿಹೊಳಿಯಿಂದ ಹಿಡಿದು ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ತನಕ ಎಲ್ಲಾ ನಾಯಕರು ಪ್ರತಿನಿಧಿಸೋ ಜಿಲ್ಲೆ ಬೆಳಗಾವಿ. ಬೆಳಗಾವಿ-ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಪ್ರತಿಷ್ಠೆ…ಹಾಗೇ ಇಬ್ರ ಮಧ್ಯೆ ಟಫ್ ಫೈಟ್ ಕೂಡ ಇದೆ. ಬೆಳಗಾವಿಯಲ್ಲಿ ಸಧ್ಯಕ್ಕೆ 18 ವಿಧಾನಸಭಾ ಕ್ಷೇತ್ರಗಳಿದ್ರೆ ಆ ಪೈಕಿ 13ರಲ್ಲಿ ಬಿಜೆಪಿ ಎಂಎಲ್ಎಗಳಿದ್ದಾರೆ. 5ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಪೈಕಿ ಬಿಜೆಪಿ ಎಂಎಲ್ಎ ಇದ್ದ ಎರಡು ಕ್ಷೇತ್ರಗಳು ಖಾಲಿಯಾಗಿವೆ. ಆ ಕ್ಷೇತ್ರಗಳ ಶಾಸಕರ ಅಕಾಲಿಕ ನಿಧನದಿಂದ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೆಕ್ಟುನೆಕ್ ಫೈಟ್ ಇದೆ.
ಬೆಳಗಾವಿ ಗ್ರಾಮೀಣ
ಸ್ನೇಹಿತರೇ ನಾವೀಗ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿದ್ದೀವಿ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಇದು ರಾಜ್ಯ ಮಹಿಳಾ ಕಾಂಗ್ರೆಸ್ನಲ್ಲಿ ಬಲಿಷ್ಠ ನಾಯಕಿಯಾಗಿ ಗುರ್ತಿಸಿಕೊಳ್ತಿರೋ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತಿನಿಧಿಸ್ಥಿರೋ ಕ್ಷೇತ್ರ.
2008 ಹಾಗೂ 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಜಯ ಪಾಟೀಲ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ರು. ಅದ್ರಲ್ಲೂ 2013ರ ಚುನಾವಣೆ ಸಂಜಯ್ ಪಾಟೀಲ್ ಅವರದ್ದು ಇಲ್ಲಿ ಪ್ರಯಾಸದ ಗೆಲುವಾಗಿತ್ತು. 2013ರಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಸಂಜಯ್ ಪಾಟೀಲ್ಗೆ ಸ್ವತಂತ್ರ ಅಭ್ಯರ್ಥಿಯಾಗಿದ್ದ ಕಿಣೇಕರ ಮನೋಹರ ಕಲ್ಲಪ್ಪ ಹಾಗೇ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಸ್ಪರ್ಧೆ ಕೊಟ್ಟಿದ್ರು. ಹಾಗಿದ್ರೂ ಕೂಡ ಬಿಜೆಪಿಯೇ ಇಲ್ಲಿ ಗೆದ್ದುಕೊಂಡಿತ್ತು. ಆದ್ರೆ 2018ರ ಚುನಾವಣೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಲಕ್ಷ್ಮೀ ಹೆಬ್ಬಾಳ್ಕರ್ ದೊಡ್ಡ ಅಂತರದ ಗೆಲುವು ಸಾಧಿಸಿದ್ರು. 1 ಲಕ್ಷಕ್ಕೂ ಅಧಿಕ ವೋಟ್ಗಳನ್ನ ಪಡೆಯೋ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಬಾರಿಗೆ ಶಾಸಕಿಯಾಗಿ ಎಲೆಕ್ಟ್ ಆಗಿದ್ರು. ಇದೇ ಸಂಧರ್ಭದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ಬಾರಿಸೋಕೆ ಮುಂದಾಗಿದ್ದ ಸಂಜಯ ಪಾಟೀಲ ಅವರು ಕೇವಲ 50 ಸಾವಿರ ಮತಗಳನ್ನ ಪಡೆಯೋಕೆ ಮಾತ್ರ ಶಕ್ತವಾದ್ರು.
ಈ ಬಾರಿ ಚುನಾವಣೆ ಇನ್ನಷ್ಟು ರಂಗೇರುವ ಸಾಧ್ಯತೆ ಇದೆ.ಅದಕ್ಕೆ ಕಾರಣ ರಮೇಶ್ ಜಾರಕಿಹೊಳಿ. ಕಳೆದ ಬಾರಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದಾಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೆಲುವಿಗೆ ಬೆಂಬಲ ಕೊಟ್ಟಿದ್ರು. ಅದ್ರೆ ಈಗ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷಕ್ಕೆ ಹಾರಿರೋದ್ರಿಂದ ಇಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಬಿಜೆಪಿ ಹೆಣೆಯೋ ತಂತ್ರಕ್ಕೆ ರಮೇಶ್ ಜಾರಕಿಹೊಳಿ ಅವರೇ ಸಾರಥ್ಯ ವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ರಮೇಶ್ ಜಾರಕಿಹೊಳಿ ಭೇಟಿ ಕೊಟ್ಟಿದ್ದಾರೆ. ಮರಾಠ ಅಸ್ತ್ರದ ಮೂಲಕ ಹೆಬ್ಬಾಳ್ಕರ್ ಸೋಲಿಸಲು ಪ್ಲ್ಯಾನ್ ಮಾಡಿರುವ ಜಾರಕಿಹೊಳಿ, ಗ್ರಾಮೀಣ ಕ್ಷೇತ್ರದ ಹಲವು ಮುಖಂಡರಿಗೆ ಈಗಾಗಲೇ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಅಂತ ರಮೇಶ್ ಪಣ ತೊಟ್ಟಿದ್ದಾರೆ. ಈಗಾಗಲೇ ಒಬ್ರಿಗೊಬ್ರು ಪರೋಕ್ಷವಾಗಿ ತೀವ್ರ ವಾಗ್ದಾಳಿ ಮಾಡ್ತಿದ್ದು, ಬೆಳಗಾವಿ ಗ್ರಾಮೀಣ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರತಿಷ್ಠೆಯ ಕಣವಾಗಿ ರೂಪುಗೊಳ್ತಿದೆ.
2023ರ ಅಭ್ಯರ್ಥಿಗಳು
ಕಾಂಗ್ರೆಸ್ – ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ – ನಾಗೇಶ್ ಮನ್ನೋಲ್ಕರ್
ಜೆಡಿಎಸ್ – ಶಂಕರಗೌಡ ರುದ್ರಗೌಡ ಪಾಟೀಲ್
ಆಮ್ ಆದ್ಮಿ ಪಕ್ಷ –
2,09,099 ಮತದಾರರಿದ್ದು, ಮರಾಠರು ಇಲ್ಲಿ ತುಂಬಾ ಪ್ರಾಬಲ್ಯವನ್ನ ಹೊಂದಿದ್ದಾರೆ. ಅದನ್ನ ಬಿಟ್ರೆ, ಲಿಂಗಾಯತ ಮತಗಳು, ಕುರುಬ, ದಲಿತ, ಮುಸ್ಲಿಂ ಹಾಗೂ ಜೈನ್ ಮತಗಳು ಇಲ್ಲಿ ಪ್ರಮುಖ ಸ್ಥಾನವನ್ನ ಹೊಂದಿವೆ.
ಬನ್ನಿ…. ಮತದಾರರರ ಮನಸ್ಸಲ್ಲಿ ಏನಿದೆ ಅನ್ನೋದನ್ನ ಅವರ ಬಾಯಿಂದಲೇ ಕೇಳೋಣ.. ನಾವು ಮಾಡಿರೋ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ!
-masthmagaa.com
Contact Us for Advertisement