masthmagaa.com:
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿರುವುದನ್ನು ಖಂಡಿಸಿ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ನೂರಾರು ಸಂಘಟನೆಗಳು ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದು, ನಾಳೆ ಇಡೀ ರಾಜ್ಯವೇ ಸ್ತಬ್ಧವಾಗುವ ಸಾಧ್ಯತೆ ಇದೆ. ಕರ್ನಾಟಕ ಬಂದ್ ದಿನ ಮಹಾದಿಗ್ಬಂಧನಕ್ಕೆ ಕನ್ನಡಪರ ಸಂಘಟನೆಗಳು ಪ್ಲಾನ್ ಮಾಡಿವೆ. ಈ ಸಂಬಂಧ ಈಗಾಗಲೇ ಇಡೀ ರಾಜ್ಯಕ್ಕೆ ಕನ್ನಡಪರ ಸಂಘಟನೆಗಳು ಸಂದೇಶ ಕೊಟ್ಟಿವೆ. ಇದರ ನಡುವೆಯೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗಿದ್ದು ನಾಳೆ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಆಯಾ ಜಿಲ್ಲಾಧಿಕಾರಿಗೆ ನೀಡಿದೆ. ಅತ್ತ ಪ್ರತಿಭಟನೆ ಮಾಡೋದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಂದ್ಗೆ ಅವಕಾಶವಿಲ್ಲ ಅಂತ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಇದನ್ನ ಮೀರಿ ಬಂದ್ ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಯಾವ ಕ್ರಮ ಕೈಗೊಳ್ಳಬೇಕು ಅಂತ ಪೊಲೀಸರಿಗೆ ನಿರ್ದೇಶನ ಕೊಡುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಇನ್ನೊಂದ್ ಕಡೆ ತಮಿಳು ಸಿದ್ಧಾರ್ಥ್ ಅವರು ತಮ್ಮ ನಟನೆಯ ʻಚಿತ್ತʼ ಸಿನಿಮಾ ರಿಲೀಸ್ ಹಿನ್ನಲೆ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಸುದ್ಧಿಗೋಷ್ಟಿಯನ್ನ ಕರವೇ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಕಾವೇರಿ ವಿವಾದ ಹೆಚ್ಚಾಗಿರುವ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ. ಇದು ಆರ್ಡರ್ ಅಲ್ಲ ಬದಲಿಗೆ ಮನವಿ. ಕೂಡಲೇ ಸಿನಿಮಾದ ಪ್ರಚಾರ ನಿಲ್ಲಿಸಿ ಅಂತ ಸಿದ್ಧಾರ್ಥ್ ಬಳಿ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಆಗ ದಯವಿಟ್ಟು ಎಲ್ಲರೂ ನನ್ನ ಸಿನಿಮಾ ನೋಡಿ ಅಂತ ಹೇಳಿ ಕೈಮುಗಿದು ಸಿದ್ಧಾರ್ಥ್ ಅಲ್ಲಿಂದ ಹೊರಟು ಹೋಗಿದ್ದಾರೆ.
-masthmagaa.com
Contact Us for Advertisement