masthmagaa.com:
ಸಂಪುಟ ಪುನರ್ ರಚನೆ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವ್ರ ಖಾತೆ ಬದಲಾಯಿಸಲಾಗುತ್ತೆ ಅನ್ನೋ ಗುಸುಗುಸು ಸುದ್ದಿ ಬಿಜೆಪಿ ಪಾಳಯದಲ್ಲಿ ಎದ್ದಿದೆ. ಜೊತೆಗೆ ಅನುಭವಿ ಆರ್. ಅಶೋಕ್ ಅವ್ರಿಗೆ ಮರಳಿ ಗೃಹಖಾತೆ ನೀಡ್ಬಹುದು ಅಂತ ಕೂಡ ಹೇಳಲಾಗ್ತಿದೆ. ಅಂದ್ಹಾಗೆ ಆರಗ ಜ್ಞಾನೇಂದ್ರ ಕೂಡ ಬಿಜೆಪಿಯಲ್ಲಿ ಹಿರಿಯರು. ಆದರೆ, ಮೊದಲ ಬಾರಿಗೆ ಸಚಿವರಾಗಿರುವ ಅವರಿಗೆ ಅತ್ಯಂತ ಮಹತ್ವದ ಖಾತೆ ವಹಿಸಲಾಗಿದೆ. ಗೃಹ ಸಚಿವರಾದವರು ಖಡಕ್ ಹಾಗೂ ಸೂಕ್ಷ್ಮ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಜಾಣ್ಮೆ ಹೊಂದಿರಬೇಕಾಗುತ್ತದೆ. ಜ್ಞಾನೇಂದ್ರ ಮೃದು ಸ್ವಭಾವದವರು. ಜತೆಗೆ ಅನುಭವದ ಕೊರತೆಯೂ ಇದೆ ಎಂಬ ಅಭಿಪ್ರಾಯವಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆರಗ ಜ್ಞಾನೇಂದ್ರ ಅವ್ರು ಕೂಡ ಗೃಹ ಸಚಿವರಾದ ಬಳಿಕ ಹೇಳಿಕೆಗಳಿಂದಲೇ ಸಾರ್ವಜನಿಕ ಮತ್ತು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಸರಕಾರಕ್ಕೂ ಮುಜುಗರ ತರುತ್ತಿದೆ. ಹಾಗಾಗಿ ಜ್ಞಾನೇಂದ್ರ ಅವರಿಗೆ ಗೃಹ ಇಲಾಖೆ ನೀಡುವಂತೆ ಈ ಹಿಂದೆ ಸಲಹೆ ಕೊಟ್ಟಿದ್ದ ಸಂಘ ಪರಿವಾರವೇ ಈಗ ಬೇರೆಯವರಿಗೆ ನೀಡಲು ಸೂಚಿಸುತ್ತಿದೆ ಎನ್ನಲಾಗಿದೆ. ಇದ್ರ ಬೆನ್ನಲ್ಲೇ ಕೃಷಿ ಸಚಿವ ಬಿಸಿ ಪಾಟೀಲ್ ಕೂಡ ಮೆತ್ತಗೆ ಒಂದು ಟವೆಲ್ ಹಾಕಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿರೋ ಅವ್ರು, 25 ವರ್ಷ ಪೋಲಿಸ್ ಇಲಾಖೆಯಲ್ಲಿ ಕೆಲ್ಸ ಮಾಡಿದ್ದೀನಿ, ಗೃಹಖಾತೆ ಕೊಟ್ರೆ ಸಮರ್ಥವಾಗಿ ನಿಭಾಯಸ್ತೀನಿ ಅಂತ ಹೇಳಿದ್ದಾರೆ. ಆದ್ರೆ ಸಂಪುಟ ಸರ್ಜರಿ ಆದಾಗ್ಲೆ ಇದಕ್ಕೆಲ್ಲ ಉತ್ತರ ಸಿಗೋದು. ಅಲ್ಲಿವರ್ಗೂ ಕಾಯಬೇಕಾಗಿದೆ.
-masthmagaa.com
Contact Us for Advertisement