masthmagaa.com:
ಲೋಕಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗ್ತಿದ್ದಂತೆ ಆಯಾ ರಾಜ್ಯಗಳಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳಾಗ್ತಿವೆ. ಕೇರಳದ ವೈನಾಡಿನ ಸಂಸದರಾಗಿರೊ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇಂಡಿಯಾ ಮೈತ್ರಿಗೆನೇ ಸಿಪಿಐ ಪಕ್ಷ ಬಿಗ್ ಶಾಕ್ ಕೊಟ್ಟಿದೆ. ವೈನಾಡು ಕ್ಷೇತ್ರದಿಂದ ಆನ್ನಿ ರಾಜಾ ಅವ್ರನ್ನ ಸಿಪಿಐ ಪಕ್ಷ ಕಣಕ್ಕಿಳಿಸಿದೆ. ಹೀಗಾಗಿ ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರಗಳಲ್ಲಿ ಸಿಪಿಐ (ಎಂ) 15, ಸಿಪಿಐ 4 ಸ್ಥಾನಗಳನ್ನ ಉಳಸ್ಕೊಂಡು ಕೇವಲ ಒಂದು ಸ್ಥಾನವನ್ನ ಕಾಂಗ್ರೆಸ್ಗೆ ಬಿಟ್ಟು ಕೊಟ್ಟಿದ್ವು. ಈ ಮೂಲಕ ಇಂಡಿಯಾ ಕೂಟದ ಮೈತ್ರಿ ಮುರಿದು ಬಿದ್ದಿದೆ. ಇದ್ರ ಮಧ್ಯೆ ಕಾಂಗ್ರೆಸ್ ಕೇರಳದಲ್ಲಿ 16 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತೆ ಅಂತ ವಿಪಕ್ಷ ನಾಯಕ ವಿಡಿ ಸತೀಶ್ನ ಪುನರುಚ್ಚರಿಸಿದ್ದಾರೆ. ಜೊತೆಗೆ ಯುನೈಟೈಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಜೊತೆ ಸೇರಿ ಮೈತ್ರಿ ಮಾಡ್ಕೊತಿವಿ ಅಂತ ಹೇಳಿದ್ದಾರೆ. ಈ ಮೂಲಕ ಇಂಡಿಯಾ ಮೈತ್ರಿ ಕೂಟಕ್ಕೆ ಕೇರಳದಲ್ಲಿ ಭಾರಿ ಹಿನ್ನಡೆಯಾಗಿದೆ. ಹೀಗಾಗಿ ಕೇರಳ ಬಿಟ್ಟು ಕರ್ನಾಟಕ ಅಥ್ವಾ ತೆಲಂಗಾಣದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಮಾಡೊಕೆ ಮುಂದಾಗಿದ್ದಾರೆ ಅಂತ ಸುಳಿವು ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಅಥ್ವಾ ತೆಲಂಗಾಣದ ಮಲ್ಕಾಜಗಿರಿ ಕ್ಷೇತ್ರದಿಂದ ರಾಹುಲ್ ಲೋಕಸಭೆ ಅಖಾಡಕ್ಕೆ ಧುಮುಕಲಿದ್ದಾರೆ ಅಂತೇಳಲಾಗ್ತಿದೆ. ಇನ್ನು ಕೇರಳದಲ್ಲಿ ಬಿಜೆಪಿ ರಾಜ್ಯ ಘಟಕದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಮೋದಿ, ನಮ್ಮ ಆಡಳಿತದ ಕಳೆದ 10 ವರ್ಷಗಳಲ್ಲಿ ಇತರ ರಾಜ್ಯಗಳಂತೆ ಕೇರಳ ಕೂಡ ಅಭಿವೃದ್ಧಿ ಯೋಜನೆಗಳ ಲಾಭ ಪಡ್ಕೊಂಡಿದೆ. ಇಲ್ಲಿನ ಜನತೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರಕಾರ ಸರ್ವ ಪ್ರಯತ್ನ ಮಾಡಿದೆ ಅಂತ ಮೋದಿ ಹೇಳಿದ್ದಾರೆ. ಅತ್ತ ಅಸ್ಸಾಂನಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಣಾ ಗೋಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ನೇರವಾಗಿ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವ್ರನ್ನ ಮೀಟ್ ಮಾಡಿ, ಬಿಜೆಪಿ ಸೇರಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.
-masthmagaa.com
Contact Us for Advertisement