masthmagaa.com:
ಸುಡಾನ್ನ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷ ಕೊನೆಗೊಳ್ಳುವ ಯಾವ ಲಕ್ಷಣನೂ ಕಾಣ್ತಿಲ್ಲ. ಸಂಘರ್ಷದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದು, 2,600 ಜನರು ಗಾಯಗೊಂಡಿದ್ದಾರೆ. ಇತ್ತ ಸಂಘರ್ಷ ಪೀಡಿತ ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳೋದಾಗಿ ಭಾರತ ಹೇಳಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ ಹಾಗೂ ಯುಎಇ ಜೊತೆಯಲ್ಲಿ ಮಾತುಕತೆ ನಡೆಸಲಾಗ್ತಿದೆ ಅಂತ ತಿಳಿದು ಬಂದಿದೆ. ಇನ್ನು ಸೌದಿ ಹಾಗೂ ಯುಎಇ ಭಾರತೀಯರ ಸುರಕ್ಷತೆಗೆ ಬೇಕಾದ ಸಹಾಯ ಮಾಡೋದಾಗಿ ಭರವಸೆ ನೀಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಂದಹಾಗೆ ಸುಡಾನ್ನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಜನಗಳ ಸ್ಥಳಾಂತರ ಸೇರಿದಂತೆ ಇತರ ಚಟುವಟಿಕೆಗಳನ್ನ ನಡೆಸಲು ಅಪಾಯಕಾರಿಯಾಗಿದೆ ಅಂತ ವರದಿಯಾಗಿದೆ. ಇನ್ನೊಂದ್ ಕಡೆ ಸುಡಾನ್ನ ಖಾರ್ಟೂಮ್ನಲ್ಲಿ ಯಾವುದೇ ಮಾನವೀಯ ನೆರವುಗಳು ಹಾಗೂ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗ್ತಿಲ್ಲ ಅಂತ ರೆಡ್ ಕ್ರಾಸ್ ಸಂಸ್ಥೆ ಹೇಳಿದೆ. ಜೊತೆಗೆ ಜನರು ಸ್ಥಳಾಂತರ ಮಾಡುವಂತೆ ಕೇಳಿಕೊಳ್ತಿದ್ದಾರೆ ಅದೂ ಈ ಪರಿಸ್ಥಿತಿಯಲ್ಲಿ ಕಷ್ಟವಾಗ್ತಿದೆ. ಈ ಸಂಘರ್ಷ ಇದೇ ರೀತಿ ಕಂಟಿನ್ಯೂ ಆದ್ರೆ ಸುಡಾನ್ನ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿತಗೊಳ್ಳುತ್ತೆ ಅಂತ ರೆಡ್ ಕ್ರಾಸ್ ಎಚ್ಚರಿಸಿದೆ. ಮತ್ತೊಂದ್ ಕಡೆ ಎರಡೂ ಸೇನೆಗಳು ಈ ಉದ್ವಿಗ್ನತೆಯನ್ನ ಕೊನೆಗೊಳಿಸ್ಬೇಕು ಅಂತ ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಒತ್ತಾಯಿಸಿದ್ದಾರೆ.
-masthmagaa.com
Contact Us for Advertisement