masthmagaa.com:
ರಾಷ್ಟ್ರಾದ್ಯಂತ ತೀವ್ರ ಕೋಲಾಹಲಕ್ಕೆ ಹುಟ್ಟಿಸಿರೋ ಪ್ರಜ್ವಲ್ ರೇವಣ್ಣರ ಪೆನ್ಡ್ರೈವ್ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಈ ಕೇಸ್ ವಿಚಾರವಾಗಿ ವಿಶೇಷ ತನಿಖಾ ದಳ ಅಥವಾ ಎಸ್ಐಟಿ, ಜಗತ್ತಿನ ಎಲ್ಲ ಇಮಿಗ್ರೇಷನ್ ಸೆಂಟರ್ಗಳಿಗೂ ಪ್ರಜ್ವಲ್ ವಿರುದ್ದ ಲುಕ್ಔಟ್ ನೋಟಿಸ್ ಹೊರಡಿಸಿದೆ. ಇದರಿಂದ ಈಗ ಎಲ್ಲಾ ವಿಮಾನ ನಿಲ್ದಾಣಗಳು ಹಾಗೂ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳು ಕೂಡ ಪ್ರಜ್ವಲ್ ಸಿಕ್ಕಿದ್ರೆ, ಅದರ ಮಾಹಿತಿಯನ್ನ ಎಸ್ಐಟಿಗೆ ಕೊಡಬೇಕು. ಇನ್ನು ಲುಕ್ಔಟ್ ನೋಟಿಸ್ಗೂ ಪ್ರಜ್ವಲ್ ಶರಣಾಗದಿದ್ರೆ, ಅವರನ್ನ ಪತ್ತೆ ಮಾಡೊಕೆ ಕೋರ್ಟ್ನಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗೊ ಸಾಧ್ಯತೆ ಇದೆ ಅಂತೇಳಲಾಗ್ತಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬುಧವಾರ ರಾತ್ರಿ ದುಬೈಗೆ ಹಾರಿದ್ದಾರೆ ಅನ್ನೋ ಮಾಹಿತಿಬರ್ತಿದೆ. ಅಂದ್ಹಾಗೆ ಆರೋಪಿ ಪ್ರಜ್ವಲ್ ರೇವಣ್ಣ ಮೇ 15ಕ್ಕೆ ಜರ್ಮನ್ನ ಮ್ಯೂನಿಚ್ನಿಂದ ಪ್ರಯಾಣ ಬೆಳೆಸಿ ಮೇ 16ರ ಮಧ್ಯ ರಾತ್ರಿ ಬೆಂಗಳೂರಿಗೆ ಫ್ಲೈಟ್ ಮೂಲಕ ಬರಲಿದ್ದಾರೆ ಅಂತ ಸುದ್ದಿ ಹರಿದಾಡ್ತಿತ್ತು. ಈ ವಿಚಾರವಾಗಿ ಪ್ರಜ್ವಲ್ ಬುಕ್ ಮಾಡಿರೊ ಫ್ಲೈಟ್ ಟಿಕೆಟ್ನ ಫೋಟೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ನಡುವೆಯೇ ಈಗ ಈ ರೀತಿ ಸುದ್ದಿ ಹರಿದಾಡ್ತಿದೆ. ಮತ್ತೊಂದೆಡೆ ಪ್ರಜ್ವಲ್ ಅವ್ರಿಗೆ ಕೇಂದ್ರ ಸರ್ಕಾರವೇ ರಾಜತಾಂತ್ರಿಕ ಪಾಸ್ಪೋರ್ಟ್ ನೀಡಿರೊದ್ರಿಂದ ರಾತ್ರೊ ರಾತ್ರಿ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ ಅಂತ ಗೃಹ ಸಚಿವ ಜಿ ಪರಮೇಶ್ವರ ಗಂಭೀರ ಆರೋಪ ಮಾಡಿದ್ದಾರೆ. ಅಲ್ದೇ ಲುಕ್ಔಟ್ ನೋಟಿಸ್ ಹೊರಡಿಸಿದ್ದರಿಂದ 24 ಗಂಟೆ ಒಳಗಾಗಿ ಆರೋಪಿಗಳು ವಿಚಾರಣಾ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗುತ್ತೆ. ಪ್ರಜ್ವಲ್ ವಿದೇಶದಲ್ಲಿ ಇರೋದ್ರಿಂದ ವಿಚಾರಣೆಗೆ ಬಂದಿಲ್ಲ. ಪ್ರಕರಣದ ಇನ್ನೊರ್ವ ಆರೋಪಿ ಹೆಚ್.ಡಿ.ರೇವಣ್ಣ ಮೇ 2ರಂದು ವಿಚಾರಣೆಗೆ ಹಾಜರಾಗೊದಾಗಿ ಹೇಳಿದ್ರು. ಹಾಜರಾಗಿಲ್ಲ ಅಂದ್ರೆ ಕಾನೂನಿನ ಪ್ರಕಾರ ಅವರನ್ನ ಬಂಧಿಸಬೇಕಾಗುತ್ತೆ ಅಂತ ಪರಮೇಶ್ವರ್ ವಾರ್ನ್ ಮಾಡಿದ್ದಾರೆ. ಆದ್ರೆ ಪ್ರಜ್ವಲ್ ವಿದೇಶಕ್ಕೆ ತೆರಳಲು ವಿದೇಶಾಂಗ ಸಚಿವಾಲಯದಿಂದ ಯಾವುದೇ ಅನುಮತಿ ಕೇಳಿಲ್ಲ. ಅವ್ರು ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳಿದ್ದಾರೆ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಇನ್ನೊಂದೆಡೆ ಈ ಕೇಸ್ ವಿಚಾರವಾಗಿ ಪ್ರಜ್ವಲ್ ವಿರುದ್ದ ಮತ್ತೊಂದು ದೂರು ದಾಖಲಾಗಿದೆ. ಹೊಳೇನರಸಿಪುರ ಟೌನ್ ಪೋಲಿಸ್ ಠಾಣೆಯಲ್ಲಿ ಮಹಿಳೆಯೊಬ್ರು ಪ್ರಜ್ವಲ್ ವಿರುದ್ದ ದೂರು ನೀಡಿದ್ದಾರೆ.ಇನ್ನು ದೂರು ದಾಖಲಿಸಿದವ್ರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಅಂತ ಕೂಡ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಅತ್ತ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರೊ ಸಂತ್ರಸ್ಥೆಯನ್ನ ಕೋರ್ಟ್ಗೆ ಹಾಜರು ಪಡಿಸಲಾಗಿದೆ. ಅಲ್ದೇ ಸೆಕ್ಷನ್ 164ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನ ದಾಖಲಿಸಲಾಗಿದೆ. ಈ ನಡುವೆ ಪ್ರಕರಣದ ಮತ್ತೊರ್ವ ಆರೋಪಿ ಶಾಸಕ ಎಚ್.ಡಿ. ರೇವಣ್ಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗ ಅರ್ಜಿ ವಿಚಾರಣೆ ಕೂಡ ನಡಿತಿದೆ.
ಇನ್ನು ಪ್ರಜ್ವಲ್ಗೆ ಸಂಬಂಧಿಸಿದ ಪೆನ್ಡ್ರೈವ್ನ್ನ ಹಂಚಿದ ಆರೋಪದ ಮೇಲೆ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ನವೀನ್ ಗೌಡ ಅನ್ನೊರಿಗೆ SIT ಅಧಿಕಾರಿಗಳು ನೋಟಿಸ್ ನೀಡಿ, ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಮೇ 4ರಂದು ಡೇಟ್ ಫಿಕ್ಸ್ ಮಾಡಲಾಗಿದೆ. ಅಂದ್ಹಾಗೆ ಏಪ್ರಿಲ್ 8ರಂದು “ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಬಿಡುಗಡೆಗೆ ಕ್ಷಣಗಣನೆ 8AM” ಅಂತ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ರು, ಅದಾದ ನಂತರ ಇವರ ಮೇಲೆ ಪ್ರಕರಣ ದಾಖಲಾಗಿತ್ತು, ಬಳಿಕ ಫೇಸ್ ಬುಕ್ ಖಾತೆಯನ್ನೆ ಡಿಲೀಟ್ ಮಾಡಿ ಇವ್ರೆ ಲೀಕ್ ಮಾಡಿದ್ರು ಅಂತ ಆರೋಪ ಕೇಳಿ ಬಂದಿದೆ. ಇನ್ನೊಂದಡೆ ಪ್ರಜ್ವಲ್ರ ಮೊಬೈಲ್ನಿಂದ ವಿಡಿಯೋಗಳನ್ನ ಎಗರಿಸಿದ್ದು ಅವ್ರ ಮಾಜಿ ಕಾರು ಚಾಲಕ ಕಾರ್ತಿಕ್ ಅಂತೇಳಲಾಗ್ತಿದೆ. ಪ್ರಜ್ವಲ್ರ ಮೊಬೈಲ್ ಪಾಸ್ವರ್ಡ್ ಬಗ್ಗೆ ಕಾರ್ತಿಕ್ಗೆ ಗೊತ್ತಿತ್ತು. ಕಾರ್ತಿಕ್, ಪ್ರಜ್ವಲ್ ಸ್ನೇಹಿತರ ತರ ಇದ್ರು. ಹೀಗಾಗಿ ಪ್ರಜ್ವಲ್ ನಿದ್ರೆಗೆ ಜಾರಿದ ವೇಳೆ ಏರ್ ಡ್ರಾಪ್ ಮೂಲಕ ಎಲ್ಲಾ ವೀಡಿಯೋಗಳನ್ನು ತನ್ನ ಹೊಸ ಮೊಬೈಲ್ಗೆ ಕಳುಹಿಸಿಕೊಂಡಿದ್ದಾನೆ ಅಂತ ಈಗ ಒಂದೊಂದೇ ಮಾಹಿತಿಗಳು ಹೊರ ಬರ್ತಿವೆ. ಇನ್ನು ಎಂದಿನಂತೆ ಈ ಪ್ರಕರಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಕೆಸರೆರಚಾಟ ಮುಂದುವರೆದಿದೆ. ಇದು 420ಗಳ ಕೆಲಸ ಅಂತ ಡಿಕೆ ಸಹೋದದರ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಕಾರು ಡ್ರೈವರ್ ಕಾರ್ತಿಕ್ ಮಲೇಷ್ಯಾದಲ್ಲಿದ್ದಾನೆ.ಅವರನ್ನ ಕಾಂಗ್ರೆಸ್ನವರೇ ಕಳಿಸಿದ್ದಾರೆ ಅಂತ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇದೆಲ್ಲದ್ರ ನಡುವೆ ಕೇಸ್ಗೆ ಸಂಬಂಧಿಸಿದಂತೆ ಸಚಿವ ಆರ್.ಬಿ.ತಿಮ್ಮಾಪುರ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರಜ್ವಲ್ ರೇವಣ್ಣರನ್ನ ಹಿಂದೂಗಳ ಪವಿತ್ರ ದೇವರು ಶ್ರೀಕೃಷ್ಣರಿಗೆ ಹೋಲಿಕೆ ಮಾಡಿ, ಪ್ರಜ್ವಲ್ ಶ್ರೀಕೃಷ್ಣನ ದಾಖಲೆಯನ್ನು ಕೂಡ ಮುರಿಯಬೇಕು ಅಂದ್ಕೊಂಡಿರಬೇಕು. ಆದ್ರೆ, ಇದು ಗಿನ್ನಿಸ್ ದಾಖಲೆಯಾಗಬಹುದೇನೋ ಅಂತ ವ್ಯಂಗ್ಯ ಆಡಿದ್ದಾರೆ. ಸಚಿವರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಅಲ್ದೇ ತಿಮ್ಮಾಪುರ ಕೃಷ್ಣರ ಭಕ್ತರಿಗೆ ಹಾಗೂ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಆ ಕಡೆ ಶಿವಮೊಗ್ಗದಲ್ಲಿ ಪ್ರಚಾರ ಸಭೆಲೀ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ʻ400 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಪ್ರಜ್ವಲ್ ವಿಡಿಯೋ ಸಹ ಮಾಡಿದ್ದಾರೆ..ಅವ್ರ ಪರ ಮತಯಾಚನೆ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆಯಾಚನೆ ಮಾಡ್ಬೇಕು ಅಂತ ಹೇಳಿದ್ದಾರೆ. ಅಲ್ದೇ ಅತ್ಯಾಚಾರಿಯೊಬ್ಬನಿಗೆ ಪ್ರಧಾನಿ ಮತಯಾಚಿಸಿದ್ದು ಜಗತ್ತಿನಾದ್ಯಂತ ಸುದ್ದಿಯಾಗಿದೆ ಇದುವೇ ಬಿಜೆಪಿ ಸಿದ್ದಾಂತ. ಅಧಿಕಾರಕ್ಕಾಗಿ ಇವ್ರೆಲ್ಲ ಏನು ಬೇಕಾದ್ರೂ ಮಾಡ್ತಾರೆ ಅಂತ ರಾಹುಲ್ ಕಿಡಿಕಾರಿದ್ದಾರೆ.
-masthmagaa.com
Contact Us for Advertisement