masthmagaa.com:
ಉತ್ತರಾಖಂಡದಲ್ಲಿ ಸಂಘರ್ಷ ಭುಗಿಲೆದ್ದಿದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದಾರೆ ಅಂತೇಳಿ ಮದರಸ ಮತ್ತು ಮಸೀದಿಯನ್ನ ತೆರವು ಮಾಡಲಾಗಿತ್ತು. ಇದರ ಪರಿಣಾಮ ಉತ್ತರಾಖಂಡದ ಹಲ್ದ್ವಾನಿ ಪ್ರದೇಶದಲ್ಲಿ ಗಲಭೆ ಉಂಟಾಗಿದೆ. ಸರ್ಕಾರದ ವಿರುದ್ಧ ಉದ್ರಿಕ್ತ ಗುಂಪುಗಳು ಬೀದಿಗಿಳಿದಿದ್ದು ಅದು ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ 5 ಮಂದಿ ಮೃತಪಟ್ಟು, 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 100 ಮಂದಿ ಪೊಲೀಸ್ ಸಿಬ್ಬಂದಿಯೇ ಸೇರಿದ್ದಾರೆ. ಅಂದ್ಹಾಗೆ ಉತ್ತರಖಂಡಾದ ನೈನೀತಾಲ್ ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಅಕ್ರಮವಾಗಿ ಕಟ್ಟಿದ್ದಾರೆ ಅಂತೇಳಿ ಮದ್ರಾಸಾ ಮತ್ತು ಮಸೀದಿಯನ್ನ ಫೆಬ್ರುವರಿ 08 ರಂದು ತೆರವು ಮಾಡಿದ್ರು. ಇದ್ರಿಂದ ಆಕ್ರೋಶಗೊಂಡ ಅಲ್ಲಿನ ಸ್ಥಳೀಯರು, ತಕ್ಷಣವೇ ಪೊಲೀಸ್ ಮತ್ತು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಾಹನಗಳಿಗೆಲ್ಲಾ ಬೆಂಕಿ ಹಚ್ಚಿ ಹಿಂಸಾಚಾರ ಮಾಡಿದಾರೆ. ಇನ್ನು ಪರಿಸ್ಥಿತಿ ಕೈ ಮೀರ್ತಿದ್ದಂತೆ ಆ ಪ್ರದೇಶದಲ್ಲಿ ಕರ್ಫ್ಯೂ ಹೇರಲಾಗಿದೆ. ನೈನೀತಾಲ್ ಜಿಲ್ಲೆಯ ಶಾಲಾ ಕಾಲೇಜುಗಳನ್ನ ಬಂದ್ ಮಾಡಲಾಗಿದೆ. ಇಂಟರ್ನೆಟ್ ಸೇವೆಯನ್ನ ತಾತ್ಕಾಲಿಕವಾಗಿ ಶಟ್ಡೌನ್ ಮಾಡಲಾಗಿದೆ. ಜೊತೆಗೆ ಈ ಪ್ರದೇಶಕ್ಕೆ ಲಿಂಕ್ ಹೊಂದಿರೋ ಎಲ್ಲಾ ರೋಡ್ಗಳಿಗೆ ಬ್ಯಾರಿಕೇಡ್ ಹಾಕಿ ಸೀಲ್ ಮಾಡಲಾಗಿದೆ. ಹೊರಗಿನಿಂದ ಬರ್ತಿರೋ ವಾಹನಗಳನ್ನ ತೀವ್ರ ತಪಾಸಣೆ ಮಾಡಲಾಗ್ತಿದೆ.. ಒಟ್ಟಾರೆಯಾಗಿ ಇಡೀ ಉತ್ತರಾಖಂಡಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಪರಿಸ್ಥಿತಿ ಕೈಮೀರಿ…ಉದ್ವಿಗ್ನತೆ ಹೆಚ್ಚಾಗ್ತಿರೋ ಬೆನ್ನಲ್ಲೇ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಎಮರ್ಜೆನ್ಸಿ ಮೀಟಿಂಗ್ ಮಾಡಿದ್ದಾರೆ. ಅಲ್ದೆ, ʻಕೋರ್ಟ್ ಆದೇಶದ ಮೇರೆಗೆ ಜಿಲ್ಲಾಡಳಿತ ಈ ರೀತಿ ಮಾಡ್ತು ಅಷ್ಟೇ..ಆದ್ರೆ ಸಮಾಜ ವಿರೋಧಿಗಳು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಇದಕ್ಕೆಲ್ಲಾ ಕಾರಣರಾದ ದಂಗೆಕೋರರ ವಿರುದ್ಧ ಕಠಿಣ ಕ್ರಮ ತೆಗೆದ್ಕೊಳ್ತೀವಿʼ ಅಂತ ಹೇಳಿದ್ದಾರೆ. ಈ ಕಡೆ ಈ ಹಿಂಚಾರ ಕೋಮುಗಲಭೆಯಲ್ಲ… ಇದಕ್ಕೆ ಕೋಮು ಸಂಘರ್ಷ ಅನ್ನೋ ಪಟ್ಟ ಕಟ್ಬೇಡಿ ಅಂತ ಅಲ್ಲಿನ ಜಿಲ್ಲಾ ಮೆಜಿಸ್ಟ್ರೇಟ್ ವಂದನಾ ಸಿಂಗ್ ಮನವಿ ಮಾಡಿದ್ದಾರೆ. ಈ ಹಿಂಸಾಚಾರದಲ್ಲಿ ಯಾವುದೋ ಒಂದು ಪ್ರತ್ಯೇಕ ಸಮುದಾಯ ಮಾತ್ರ ಸೇರ್ಕೊಂಡಿಲ್ಲ ಎಲ್ಲ ಸಮುದಾಯದವರೂ ಇದ್ದಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ಉತ್ತರಖಂಡದಲ್ಲಿ ಯುಸಿಸಿ ಅಂದ್ರೆ ಏಕರೂಪ ನಾಗರಿಕ ಸಂಹಿತೆ ಮಸೂದೆ ಪಾಸ್ ಆಗಿತ್ತು. ಇದಕ್ಕೆ ತೀವ್ರ ಪರ ವಿರೋಧ ಕೂಡ ಇತ್ತು. ಇದರ ಬೆನ್ನಲ್ಲೇ ಈ ರೀತಿ ಗಲಾಟೆ ನಡೆದಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ ಉತ್ತರಪ್ರದೇಶದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಉತ್ತರಖಂಡದ ಹಿಂಸಾಚಾರ ಉತ್ತರ ಪ್ರದೇಶಕ್ಕೂ ಹರಡೋ ಸಾಧ್ಯತೆ ಇರೋದ್ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆ ಒದಗಿಸಲಾಗಿದೆ.
-masthmagaa.com
Contact Us for Advertisement