masthmagaa.com:
ಜಿ7 ಸಭೆಯ ಸೈಡ್ಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಷ್ಯಾ- ಯುಕ್ರೇನ್ ಯುದ್ಧ ಪ್ರಾರಂಭ ಆದಾಗಿಂದ ಇದೇ ಮೊದಲ ಬಾರಿಗೆ ಉಭಯ ನಾಯಕರು ಭೇಟಿಯಾಗಿದ್ದಾರೆ. ಈ ವೇಳೆ ರಷ್ಯಾ-ಯುಕ್ರೇನ್ ಯುದ್ಧ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿರುವ ಪ್ರಮುಖ ಸಮಸ್ಯೆಯಾಗಿದೆ ಅಂತ ಮೋದಿ ಒತ್ತಿ ಹೇಳಿದ್ದಾರೆ. ಆದ್ರೆ ನಾನು ಇದನ್ನ ರಾಜಕೀಯ ಅಥ್ವಾ ಆರ್ಥಿಕ ಸಮಸ್ಯೆ ಅನ್ನೊ ರೀತಿಯಲ್ಲಿ ನೋಡೋದಿಲ್ಲ. ನನಗೆ ಇದು ಮಾನವೀಯತೆಯ ಸಮಸ್ಯೆಯಾಗಿ ಕಾಣ್ತಿದೆ. ಇದು ಮಾನವೀಯ ಮೌಲ್ಯಗಳ ಸಮಸ್ಯೆಯಾಗಿದೆ ಅಂತ ಮೋದಿಯವರು ಝೆಲೆನ್ಸ್ಕಿಗೆ ಹೇಳಿದ್ದಾರೆ. ಜೊತೆಗೆ ಯುದ್ಧದ ಸಂಕಟ ಏನೆಂಬುದು ನಮಗಿಂತ ನಿಮಗೆ ಹೆಚ್ಚು ತಿಳಿದಿದೆ. ಆದ್ರೆ ಕಳೆದ ವರ್ಷ ನಮ್ಮ ವಿದ್ಯಾರ್ಥಿಗಳು ಯುಕ್ರೇನ್ನಿಂದ ಹಿಂತಿರುಗಿದಾಗ ಅವರು ನೀಡಿದ ವಿವರಣೆಯಿಂದ ಯುಕ್ರೇನ್ನ ಜನರು ಅನುಭವಿಸಿದ ನೋವನ್ನ ನಾನು ಅರ್ಥಮಾಡಿಕೊಳ್ಳಬಲ್ಲೆ ಅಂತ ಮೋದಿ ತಿಳಿಸಿದ್ದಾರೆ. ಯುದ್ಧಪೀಡಿತ ಯುಕ್ರೇನ್ನಲ್ಲಿ ಮೊಬೈಲ್ ಆಸ್ಪತ್ರೆಗಳನ್ನ ನಿರ್ಮಿಸುವ ಕುರಿತು ಪ್ರಧಾನಿ ಮೋದಿಯವರ ಬಳಿ ಮಾತುಕತೆ ನಡೆಸಿದ್ದೇನೆ. ಜೊತೆಗೆ ಮೋದಿಯವರನ್ನ ಯುಕ್ರೇನ್ನ ಶಾಂತಿ ಮಾತುಕತೆಗೆ ಸೇರಲು ಆಹ್ವಾನಿಸಿದ್ದೇನೆ ಅಂತ ಝೆಲೆನ್ಸ್ಕಿ ತಿಳಿಸಿದ್ದಾರೆ.
-masthmagaa.com
Contact Us for Advertisement