masthmagaa.com:
ಚುನಾವಣೆಗೆ ಇನ್ನೇನು ಎರಡು ದಿನ ಬಾಕಿ ಇರೋವಾಗ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ IT ದಾಳಿ ನಡೆದಿದೆ. ಮಂಡ್ಯ, ಕಲಬುರಗಿ, ಹಾವೇರಿ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಕೋಟ್ಯಂತರ ರೂ. ನಗದು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಅತ್ತ ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವ್ರ ಬೆಂಬಲಿಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚವ್ಹಾಣ್ ಅನ್ನೊರ ಮನೆ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅರವಿಂದ್ ಚವ್ಹಾಣ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಿನ್ನೆ ಅರವಿಂದ್ರ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು, ದಾಖಲಾತಿಗಳನ್ನು ಪರಿಶೀಲನೆ ನಡೆಸಿ ತೆರಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಅರವಿಂದ್ ಅವರು ಬಿಜೆಪಿ ಬಿಟ್ಟು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ವಾರ ಆಯ್ತು. ಎರಡೇ ವಾರದಲ್ಲಿ ಅರವಿಂದ್ ಚವ್ಹಾಣ್ ಅಕ್ರಮ ಮಾಡಿ ಆಸ್ತಿಗಳಿಸಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಇತ್ತ ಹಾವೇರಿಯಲ್ಲಿ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೊಂದ್ ಕಡೆ ಎಸ್ಎಂ ಕೃಷ್ಣ ಸಹೋದರಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್ ಕಚೇರಿಗಳ ಮೇಲೆ ದಾಳಿ ಮಾಡಲಾಗಿದ್ದು, ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆದಿದೆ ಎಂದು ತಿಳಿದುಬಂದಿದೆ.
-masthmagaa.com
Contact Us for Advertisement