masthmagaa.com:
ಆಜಾನ್ ವಿರುದ್ಧ ಸಮರ ಸಾರಿರೋ ಹಿಂದೂ ಪರ ಸಂಘಟನೆಗಳಿಂದ ಇಂದು ಬೆಳಗ್ಗೆ ದೇವಾಲಯಗಳಲ್ಲಿ ಸುಪ್ರಭಾತ, ಭಕ್ತಿಗೀತೆ, ಭಜನೆ ಮೊಳಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಕಲಬುರುಗಿ, ಸೇರಿದಂತೆ ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಆಜಾನ್ ಮೊಳಗುವ ವೇಳೆಗೆ ಶ್ರೀರಾಮ ಭಜನೆ, ಹನುಮಾನ್ ಚಾಲೀಸಾ, ಮಂತ್ರಪಠಣ ಕೇಳಿ ಬಂದಿದೆ. ಮೈಸೂರಿನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್, ಶ್ರೀರಾಮ ಭಜನೆ ಮೂಲಕ ಸುಪ್ರಭಾತಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಇದು ಪಾಕಿಸ್ತಾನ, ಅಫ್ಘಾನಿಸ್ತಾನವಲ್ಲ, ಮಸೀದಿಗಳ ಮೇಲಿನ ಆಜಾನ್ ತೆರವುಗೊಳಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ, ಇದು ಸಂಜೆಯೊಳಗೆ ಧ್ವನಿವರ್ಧಕಗಳನ್ನು ತೆರವುಗೊಳಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬೆಂಗಳೂರಿನ ನೀಲಸಂದ್ರದ ಆಂಜನೇಯ ಸ್ವಾಮಿ ದೇವಾಲಯದ ಬಳಿ ವಾಗ್ವಾದ ನಡೆದು ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಕ್ರಮದ ವಿರುದ್ಧ ಹಿಂದೂ ಕಾರ್ಯಕರ್ತರು ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ಶ್ರೀರಾಮ ಸೇನೆ ಮತ್ತು ಹಿಂದೂಪರ ಸಂಘಟನೆಗಳ ಅಭಿಯಾನದ ಬಗ್ಗೆ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು. “ಕೋರ್ಟ್ ತೀರ್ಪಿನ ಅನ್ವಯ ಪೊಲೀಸರು ಸಂಬಂಧಿಸಿದವರಿಗೆ ನೋಟಿಸ್ ನೀಡುತ್ತಾರೆ. ಮೈಕ್ಗಳಲ್ಲಿ ಎಷ್ಟು ಡೆಸಿಬಲ್ ಪ್ರಾರ್ಥನೆ ಹಾಕಬಹುದು ಎಂದು ನಿಯಮವಿದೆ. ಅದನ್ನು ಮೀರಿದರೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರ ನೋಟಿಸ್ಗೆ ಬೆಲೆ ನೀಡದಿದ್ದರೆ ಮೈಕ್ ತೆರವುಗೊಳಿಸಲಾಗುತ್ತದೆ” ಎಂದರು. ಇನ್ನೊಂದ್ ಕಡೆ ಆಜಾನ್ಗೆ ಪ್ರತಿಯಾಗಿ ಅಭಿಯಾನ ಪ್ರಾರಂಭ ಮಾಡ್ತಾ ಇರೋರನ್ನ ಭಯೋತ್ಪಾದಕರು ಅಂತ ಕರೀಬೇಕು. ಅವ್ರನ್ನ ಯುಎಪಿಎ ಕಾಯ್ದೆಯಡಿ ಬಂಧಿಸಬೇಕು ಅಂತ ಕಾಂಗ್ರೆಸ್ ವಿಧಾನ ಪರಿಷತ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಮತ್ತೊಂದ್ ಕಡೆ ಈ ವಿಚಾರದ ಸಂಬಂಧ ವಿಪಕ್ಷ ಉಪನಾಯಕ ಯು.ಟಿ ಖಾದರ್ ನೇತೃತ್ವದ ಕಾಂಗ್ರೆಸ್ ನಿಯೋಗ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ವೇಳೆ ಯಾವುದೇ ಅನಾಹುತ ನಡೆಯದಂತೆ ಕ್ರಮಕ್ಕೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಇದ್ರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನಂತ್ರ ಮಾತಾಡಿರೋ ಅವ್ರು, ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಇದೆ. ಆ ಆದೇಶವನ್ನ ಎಲ್ಲರೂ ಪಾಲನೆ ಮಾಡ್ಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement