masthmagaa.com:
ಸಧ್ಯಕ್ಕೆ ಜಗತ್ತಿನಲ್ಲೇ ಅತ್ಯಂತ ಕ್ಲಿಷ್ಟ ಹಾಗೂ ಭೀಕರ ಆಹಾರ ಸಮಸ್ಯೆಯನ್ನ ಎದುರಿಸ್ತಿರೋ ಅಫ್ಘಾನ್ಗೆ ಭಾರತ ತನ್ನ ಸಹಾಯವನ್ನ ಮುಂದುವರೆಸಿದೆ. ಮಾನವೀಯತೆಯ ಹೆಸರಲ್ಲಿ ಅಫ್ಘಾನ್ಗೆ ಹೊಸದಾಗಿ ಸುಮಾರು 2ಕೋಟಿ KG ಗೋಧಿಯನ್ನ ಕಳುಹಿಸೋದಕ್ಕೆ ಭಾರತ ಮುಂದಾಗಿದೆ. ಇರಾನ್ನ ಚಬಹಾರ್ ಬಂದರಿನ ಮೂಲಕ ಈ ಗೋಧಿ ಅಫ್ಘಾನ್ ಜನರನ್ನ ತಲುಪಲಿದೆ ಅಂತ ಭಾರತ ಸರ್ಕಾರ ಅನೌನ್ಸ್ ಮಾಡಿದೆ. ಈ ಮೂಲಕ ತಾಲಿಬಾನ್ ಅಧಿಕಾರಕ್ಕೆ ಬಂದ್ಮೇಲೂ ಅಫ್ಘಾನ್ ಜನರಿಗೆ ಗೋಧಿ ಕಳುಹಿಸೋದನ್ನ ಭಾರತ ಕಂಟಿನ್ಯೂ ಮಾಡಿದಂತಾಗಿದೆ. ರಷ್ಯಾ-ಯುಕ್ರೇನ್ ಸಂಘರ್ಷದಿಂದ ಜಾಗತಿಕವಾಗಿ ಗೋಧಿ ಕೊರತೆ ತುಂಬಾ ಇದ್ದು ಭಾರತ ಕೂಡ ತನಗೆ ತೊಂದ್ರೆ ಆಗಬಾರದು ಅಂತ ಗೋಧಿ, ಸಕ್ಕರೆ ಸೇರಿ ಅನೇಕ ಆಹಾರಗಳ ರಫ್ತಿನ ಮೇಲೆ ನಿರ್ಬಂಧ ಹೇರಿತ್ತು. ಇಷ್ಟಾದ್ರೂ ಅಫ್ಘಾನಿಸ್ತಾನಕ್ಕೆ ಮಾತ್ರ ಮಾನವೀಯತೆ ಹೆಸರಲ್ಲಿ ಭಾರತ ಗೋಧಿ ಕಳುಹಿಸೋದನ್ನ ಯಾವುದೇ ಅಡೆತಡೆ ಇಲ್ಲದೇ ಕಂಟಿನ್ಯೂ ಮಾಡಿದೆ. ಇತ್ತೀಚಿಗೆ ತಾನೇ ಅಫ್ಘಾನಿಸ್ತಾನದ ಭದ್ರತೆಗೆ ಕುರಿತಂತೆ ರಷ್ಯಾದಲ್ಲಿ ಆಯೋಜನೆಗೊಂಡಿದ್ದ ಸಭೆಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಭೇಟಿ ಕೊಟ್ಟಿದ್ದರು. ಈ ವೇಳೆ ಅಫ್ಘಾನ್ಗೆ ಎಲ್ಲಾ ರೀತಿಯ ಸಹಾಯ ಮಾಡೋದಾಗಿ ಭಾರತ ಹೇಳಿತ್ತು. ಇದರ ಬೆನ್ನಲ್ಲೇ ಭಾರತದಿಂದ ದೊಡ್ಡ ಘೋಷಣೆ ಹೊರ ಬಂದಿದ್ದು ಅಫ್ಘಾನ್ಗೆ ವಿಶ್ವ ಆಹಾರ ಕಾರ್ಯಕ್ರಮದ ಅಡಿಯಲ್ಲಿ 2ಕೋಟಿ KG ಗೋಧಿ ಹೋಗಲಿದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯ ಅಂದ್ರೆ ಈ ಗೋಧಿ ಇರಾನ್ನ ಚಬಹಾರ್ ಮೂಲಕ ಅಫ್ಘಾನಿಸ್ತಾನಕ್ಕೆ ಹೋಗುತ್ತೆ ಅನ್ನೋದು. ಯಾಕಂದ್ರೆ ಇಷ್ಟು ದಿನ ಪಾಕಿಸ್ತಾನ ಮಾರ್ಗವಾಗಿ ಭಾರತ ಅಫ್ಘಾನ್ಗೆ ಗೋಧಿ ಹಾಗೂ ಇನ್ನಿತರ ಸಹಾಯ ಕಳುಹಿಸ್ತಿತ್ತು. ಆದ್ರೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಜಾಸ್ತಿ ಅಗ್ತಿರೋದ್ರಿಂದ ಪಾಕಿಸ್ತಾನದ ಮಾರ್ಗವನ್ನ ಬಳಸದೇ ಇರಾನ್ ಮೂಲಕ ಅಫ್ಘಾನ್ ತಲುಪೋಕೆ ಭಾರತ ಪ್ಲಾನ್ ಮಾಡಿದೆ. ಅಷ್ಟೇ ಅಲ್ಲ ಈ ಗೋಧಿ ವಿಚಾರದಲ್ಲೇ ಕಳೆದ ಬಾರಿ ಏನಾಯ್ತು ಅಂದ್ರೆ ಭಾರತ ಪಾಕಿಸ್ತಾನದ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸ್ತಿದ್ದ ಗೋಧಿಯನ್ನ ಪಾಕಿಸ್ತಾನದವರು ದಾರಿಯಲ್ಲೇ ಅಡ್ಡಗಟ್ಟಿ ಲಾರಿ ಸಮೇತ ಕದ್ದು ತಗೊಂಡು ಓಡ್ತಾ ಇದ್ರು. ಇದರಿಂದ ಅಫ್ಘಾನಿಸ್ತಾನದ ಜನರಿಗೆ ಹಾಗೂ ಪಾಕಿಸ್ತಾನದವರಿಗೆ ದೊಡ್ಡ ಹೊಡೆದಾಟ ಆಗಿದೆ ಅಂತ ಕೂಡ ವರದಿಯಾಗಿತ್ತು. ಹೀಗಾಗಿ ಈ ಬಾರಿ ಆ ತಂಟೆನೇ ಬೇಡ ಅಂತ ಭಾರತ ಇರಾನ್ ದಾರಿ ಹಿಡಿದಿದೆ. ಅಲ್ಲದೇ ಈಗೇನಾದ್ರೂ ಭಾರತದ ಲಾರಿಗಳು ಅಫ್ಘಾನ್ಗೆ ಗೋಧಿ ತಗೊಂಡು ಪಾಕಿಸ್ತಾನದ ಮಾರ್ಗವಾಗಿ ಹೋದ್ವು ಅಂದ್ರೆ, ಗೋಧಿ-ಲಾರಿ ಜೊತೆಗೆ ಡ್ರೈವರ್ ನಾಪತ್ತೆಯಾದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಪಾಕಿಸ್ತಾನದ ಪರಿಸ್ಥಿತಿ ಹೇಗಿದೆ ಅನ್ನೋದು ನಿಮಗೆ ಗೊತ್ತೇ ಇದೆ. ಅಲ್ಲಿನ ಸರ್ಕಾರಗಳ ಭಾರತ ವಿರೋಧಿ ಮನಸ್ಥಿತಿ ಅಲ್ಲಿನ ಜನರನ್ನ ಹಸಿವಿನಿಂದ ಬಳಲುವಂತೆ ಮಾಡಿಬಿಟ್ಟಿದೆ. ಒಂದು ಮೂಟೆ ಗೋಧಿ ಕಂಡ್ರೂ ಪಾಕ್ನ ಬಡ ಜನರು ಅದರ ಹಿಂದೆ ಓಡುವ ದೃಶ್ಯಗಳು ವೈರಲ್ ಆಗಿವೆ. ಹೀಗಾಗಿ ಈ ಸಂಧರ್ಭದಲ್ಲಿ ಅದು ಪಾಕಿಸ್ತಾನಕ್ಕೆ ಹೋದ್ರೆ ಅದು ಅಫ್ಘಾನ್ಗೆ ಹೋಗುವಷ್ಟರಲ್ಲೇ ಖಾಲಿಯಾಗುತ್ತೆ. ಜೊತೆಗೆ ಗಲಭೆಗೂ ಕಾರಣವಾಗುತ್ತೆ ಅಂತ ಭಾರತ ಇರಾನ್ ಮೂಲಕ ಗೋಧಿ ಕಳುಹಿಸಲಿದೆ ಅಂತ ಅಭಿಪ್ರಾಯ ಕೇಳಿ ಬರ್ತಿದೆ.
-masthmagaa.com
Contact Us for Advertisement