masthmagaa.com:
ಯುಕ್ರೇನ್ ಯುದ್ಧದಲ್ಲಿ ಭಾರತ ಮತ್ತು ಅಮೆರಿಕ ತೆಗೆದುಕೊಂಡ ನಿಲುವುಗಳು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತಾ ಅಂತ ಪ್ರಶ್ನೆ ಎದ್ದಿರೋ ಬೆನ್ನಲ್ಲೇ ಮೋದಿ ಮತ್ತು ಬೈಡನ್ ವರ್ಚುವಲ್ ಸಭೆ ನಡೆಸಿದ್ದಾರೆ. ನೇರ ಪ್ರಸಾರ ಆದ ಈ ಸಭೆಯಲ್ಲಿ ಪ್ರಧಾನಿ ಮೋದಿ ಭಾರತದ ತಟಸ್ಥ ನೀತಿಯನ್ನ ಮತ್ತೆ ಪುನರುಚ್ಚರಿಸಿದ್ದು, ಉಭಯ ದೇಶಗಳು ಸಹಜ ಮಿತ್ರರು ಅಂತ ಹೇಳಿದ್ದಾರೆ. ಮೊದ್ಲು ಮಾತಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಯಾನಕ ಸ್ಥಿತಿಲಿ ಇರೋ ಯುಕ್ರೇನ್ ಜನರಿಗೆ, ಭಾರತ ಮಾನವೀಯ ನೆರವು ನೀಡೋದಾದ್ರೆ ಅದನ್ನ ನಾವು ಸ್ವಾಗತಿಸುತ್ತೇವೆ ಅಂತ ಹೇಳಿದ್ರು. ನಂತ್ರ ಮಾತಾಡಿದ ಪ್ರಧಾನಿ ಮೋದಿ, ನಾವು ಈಗಾಗ್ಲೇ ಯುಕ್ರೇನ್ಗೆ ಔಷಧಿ, ಪರಿಹಾರ ಸಾಮಗ್ರಿಯನ್ನ ಕಳಿಸಿದ್ದೇವೆ. ಔಷಧಿಯ ಮತ್ತೊಂದು ಬ್ಯಾಚ್ ಸದ್ಯದಲ್ಲೇ ರವಾನೆಯಾಗಲಿದೆ ಅಂತ ಹೇಳಿದ್ರು. ಇನ್ನು ಯುಕ್ರೇನ್ನಲ್ಲಿರೋ ನಾಗರಿಕರ ಸುರಕ್ಷತೆ ನಮ್ಗೆ ಮುಖ್ಯ. ಮೊನ್ನೆ ಬುಚಾದಲ್ಲಿ ನಡೆದ ನಾಗರಿಕರ ಹತ್ಯೆಯನ್ನು ನಾವು ಖಂಡಿಸಿದ್ದೀವಿ. ಯುಕ್ರೇನ್ ಮತ್ತು ರಷ್ಯಾ ಅಧ್ಯಕ್ಷರೊಂದಿಗೆ ಫೋನ್ನಲ್ಲಿ ಮಾತಾಡಿ ಶಾಂತಿಗೆ ಮನವಿ ಮಾಡಿದ್ದೀವಿ. ಇಷ್ಟೇ ಅಲ್ಲದೇ ಒಬ್ಬೊರಿಗೊಬ್ರು ನೇರವಾಗಿ ಮಾತಾಡೋಕೆ ಹೇಳಿದೀವಿ ಅಂತ ಮೋದಿ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಉಭಯ ನಾಯಕರು ಕೋವಿಡ್-19, ಜಾಗತಿಕ ಆರ್ಥಿಕತೆ ಪುನರ್ಸ್ಥಾಪನೆ, ಹವಮಾನ ಬದಲಾವಣೆ, ದಕ್ಷಿಣ ಏಷ್ಯಾ ಮತ್ತು ಇಂಡೋ-ಫೆಸಿಫಿಕ್ ಭಾಗದಲ್ಲಿ ಆಗ್ತಾ ಇರೋ ಬದಲಾವಣೆಗಳ ಬಗ್ಗೆ ಮಾತಾಡಿರೋದಾಗಿ ಪ್ರಧಾನಿ ಕಾರ್ಯಾಲಯದ ಪ್ರಕಟಣೆ ಹೇಳಿದೆ. ಇನ್ನು ಈ ಸಭೆ ನಡೆಯೋವಾಗ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್, ವಿದೇಶಾಂಗ ಮಂತ್ರಿ ಎಸ್.ಜೈಶಂಕರ್, ಅಮೇರಿಕದ ಸೆಕ್ರಟರಿ ಆಫ್ ಡಿಫೆನ್ಸ್ ಲಾಯ್ಡ್ ಆಸ್ಟಿನ್, ಸೆಕ್ರಟರಿ ಆಫ್ ಸ್ಟೇಟ್ ಆಂಟೊನಿ ಜೆ ಬ್ಲಿಂಕೆನ್ ಕೂಡ ಬೈಡನ್ ಜೊತೆಗೆ ಇದ್ರು. ನಂತ್ರ ಭಾರತ ಮತ್ತು ಅಮೇರಿಕದ ನಡುವೆ 2+2 ಮಾತುಕತೆ ನಡೆದಿದೆ.
-ಇನ್ನು ವರ್ಚುವಲ್ ಸಭೆಯ ನಂತ್ರ ಶ್ವೇತಭವನದ ವಕ್ತಾರೆ ಜೆನ್ ಸಾಕಿ ಪತ್ರಕರ್ತರೊಂದಿಗೆ ಮಾತಾಡಿದ್ರು. ಈ ಸಮಯದಲ್ಲಿ ಯುಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ಯಾವ್ದಾದ್ರು ಒಂದು ಸೈಡ್ ತಗೋಳೊಕೆ ಬೈಡನ್ ಒತ್ತಡ ಹಾಕಿದ್ರಾ ಅಂತ ಕೇಳಿದ್ಕೆ, ಭಾರತ ತನ್ನ ನಿರ್ಧಾರಗಳನ್ನ ತಾನೇ ತಗೋಳುತ್ತೆ. ಆದ್ರೆ ರಷ್ಯಾ ಮತ್ತು ಚೀನಾ ನಡುವಿನ ಸಂಪರ್ಕ ನೋಡಿದ್ರೆ ಅವ್ರ ಯೋಚನೆಯಲ್ಲಿ ಬದಲಾವಣೆ ಆಗುತ್ತೆ ಅಂತ ಹೇಳಿದ್ರು. ಇನ್ನು ಇದೇ ಸಮಯದಲ್ಲಿ ಅವ್ರು, ಬೈಡನ್ ಪರೋಕ್ಷವಾಗಿ ರಷ್ಯಾದಿಂದ ಆಮದು ಹೆಚ್ಚು ಮಾಡೋದು ಭಾರತದ ಹಿತಾಸಕ್ತಿಗೆ ಒಳ್ಳೇದಲ್ಲ ಅಂತ ಮೋದಿಗೆ ಹೇಳಿರೋದಾಗಿ ಮಾಹಿತಿ ನೀಡಿದ್ರು.
-masthmagaa.com
Contact Us for Advertisement