masthmagaa.com:
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಅಧಿಕೃತವಾಗಿ ಇವತ್ತು ಪ್ರಕಟಿಸಿದೆ. ಪಕ್ಷದ ಉಪಾಧ್ಯಕ್ಷ ಮಾಜಿ ಸಿಎಂ ಬಿಎಸ್ವೈ ಅವ್ರ ಮಗ ಬಿ.ವೈ. ವಿಜಯೇಂದ್ರ ಅವ್ರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದ್ರಿಂದ ಪರಿಷತ್ ಪ್ರವೇಶ ಪಡೆದು ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆಂಬ ಬಿ.ವೈ.ವಿಜಯೇಂದ್ರ ಅವರ ಕನಸು ನುಚ್ಚುನೂರಾಗಿದೆ. ಅವ್ರನ್ನ ಪಕ್ಷ ಸಂಘಟನೆಗೆ ಹಚ್ಚಲಾಗಿದೆ ಅಂತ ಪಕ್ಷದ ಮೂಲಗಳು ತಿಳಿಸಿವೆ. ಇನ್ನ ಆ ಕಡೆ ಬಿಎಸ್ವೈ ಆಪ್ತ ಮೋಹನ್ ಲಿಂಬಿಕಾಯಿ ಅವ್ರಿಗೂ ಕೂಡ ಟಿಕೆಟ್ ಕೈತಪ್ಪಿರೋದು ಮಾಜಿ ಸಿಎಂಗೆ ಆದ ಹಿನ್ನಡೆ ಅಂತ ಬಣ್ಣಿಸಲಾಗಿದೆ. ಅವ್ರ ಬದ್ಲು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಮಹಿಳಾ ಕೋಟದಲ್ಲಿ ಕೊಪ್ಪಳ ಮೂಲದ ಹೇಮಲತಾ ನಾಯಕ್, ಹಿಂದುಳಿದ ವರ್ಗ ಕೋಟಾದಲ್ಲಿ ಕೇಶವ್ ಪ್ರಸಾದ್, ದಲಿತರ ಕೋಟಾದಲ್ಲಿ ಎಸ್ಸಿಎಸ್ಟಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವ್ರಿಗೆ ಟಿಕೆಟ್ ನೀಡಲಾಗಿದೆ. ಇದೇ ವೇಳೆ ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿಯವ್ರನ್ನ ಕಣಕ್ಕಿಳಿಸಿದೆ. ಇನ್ನ ಇದೇ ವೇಳೆ ನಾಮಪತ್ರ ಸಲ್ಲಿಕೆ ಮಾಡಲು ಕಡೆಯ ದಿನವಾದ್ದರಿಂದ ಬಿಜೆಪಿ ತನ್ನ ಅಭ್ಯರ್ಥಿ ಹೇಮಲತಾ ನಾಯಕ್ ಅವ್ರಿಗೆ ಹೆಲಿಕಾಪ್ಟರ್ ಮೂಲಕ ಕರೆಸಿಕೊಂಡು, ಎಸ್ಕಾರ್ಟ್ ಮೂಲಕ ಜಕ್ಕೂರು ವಾಯುನೆಲೆಯಿಂದ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದೆ. ಇದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅತ್ತ ಜೆಡಿಎಸ್ ಕೂಡ ತನ್ನ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು ಇತ್ತೀಚೆಗೆ ತಾನೆ ಜೆಡಿಎಸ್ಗೆ ಬಂದು ರಾಜ್ಯಾಧ್ಯಕ್ಷ ಆಗಿರೋ ಸಿ.ಎಂ.ಇಬ್ರಾಹಿಂ ಮತ್ತು ಟಿ.ಎ ಶರವಣ ಅವ್ರನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಇನ್ನ ನೆನ್ನೆ ಕಾಂಗ್ರೆಸ್ ಆ ಕಡೆ ಸಿದ್ದು-ಡಿಕೆಶಿ ಎರಡು ಬಣಕ್ಕೆ ಶಾಕ್ ಕೊಟ್ಟು ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಅವ್ರಿಗೆ ಟಿಕೆಟ್ ನೀಡಿತ್ತು.
-masthmagaa.com
Contact Us for Advertisement