masthmagaa.com:
ಖ್ಯಾತ ನಿರ್ಮಾಪಕ ರಾಮು ಅವರು ನಿರ್ಮಿಸಿರುವ ಕೊನೆಯ ಚಿತ್ರ “ಅರ್ಜುನ್ ಗೌಡ”. ಈ ಚಿತ್ರ ತೆರೆಗೆ ಬರುವುದಕ್ಕೆ ಮುಂಚೆಯೇ, ರಾಮು ಅವರು ಅಸುನೀಗಿದ್ದು ನೋವಿನ ಸಂಗತಿ. ರಾಮು ಅವರ ನಿಧನದ ನಂತರ ಮೊದಲ ಬಾರಿಗೆ “ಅರ್ಜುನ್ ಗೌಡ” ಚಿತ್ರತಂಡದಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ರಾಮು ಅಂಕಲ್, ಕೇವಲ ನಿರ್ಮಾಪಕರಷ್ಟೇ ಅಲ್ಲ. ನಮ್ಮ ಕುಟುಂಬದ ಸದಸ್ಯರ ರೀತಿ ಇದ್ದರು. ನಮ್ಮ ತಂದೆಯವರ ಜೊತೆ ನಾನು ಚಿಕ್ಕವನಾಗಿದಾಗ ಅವರ ನಿರ್ಮಾಣದ ಚಿತ್ರಗಳ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಾನು ಸಹ “ಗುಲಾಮ” ಚಿತ್ರದಿಂದ ಆರಂಭಿಸಿ ಅವರ ನಿರ್ಮಾಣದ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. “ಅರ್ಜುನ್ ಗೌಡ” ಆದ ಮೇಲೆ ಮತ್ತೊಂದು ಚಿತ್ರ ಆರಂಭಿಸೋಣ ಎಂದು ಹೇಳಿದ್ದರು. ಅವರ ಸಾವಿನ ನೋವು ನಮ್ಮಗೆಲ್ಲಾ ತುಂಬಾ ಇದೆ. ಇದರ ನಡುವೆ ನಮ್ಮ ಚಿತ್ರ ಇದೇ ಡಿಸೆಂಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಕ್ಷನ್ ಚಿತ್ರಗಳ ನಿರ್ಮಾಣಕ್ಕೆ ಹೆಸರಾದ ರಾಮು ಫಿಲಂಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರದಲ್ಲೂ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಪ್ರಜ್ವಲ್ ದೇವರಾಜ್.
ಜಾಹ್ನವಿ ಎಂಬ ಪಾತ್ರ ನನ್ನದು. ನಾಯಕನಿಗೆ ಉತ್ತಮ ಗೆಳತಿ. ಆತನನ್ನು ತುಂಬಾ ಪ್ರೀತಿಸುವ ಯುವತಿ. ಪ್ರೀತಿ ಮೂಡಿದ ನಂತರ ಏನಾಗುತ್ತದೆ ಎಂಬುದು ಚಿತ್ರದ ಕಥಾವಸ್ತು. ಚಿತ್ರ ಬಿಡುಗಡೆಗೆ ನಾನು ಕಾತುರದಲ್ಲಿದ್ದೇನೆ ಎಂದರು ನಾಯಕಿ ಪ್ರಿಯಾಂಕ ತಿಮ್ಮೇಶ್.
ರಾಮು ಫಿಲಂಸ್ ನಿರ್ಮಾಣದ 39 ನೇ ಸಿನಿಮಾ “ಅರ್ಜುನ್ ಗೌಡ”. ಇದೊಂದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಆಕ್ಷನ್, ರೊಮ್ಯಾಂಟಿಕ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದಲ್ಲಿ ಮನಸೂರೆಗೊಳ್ಳುವ ಸಾಹಸ ಸನ್ನಿವೇಶಗಳಿದೆ. “ಅರ್ಜುನ್ ಗೌಡ” ನೇರ ಸ್ವಭಾವದ ವ್ಯಕ್ತಿ. ಸಮಾಜದಲ್ಲಿನ ಕೆಲವು ತೊಡಕುಗಳನ್ನು ಸರಿಪಡಿಸಲು ಹೋರಾಡಲು ಸದಾ ಸಿದ್ದವಿರುವಾತ. ಬರೀ ಮನೋರಂಜನೆ ಅಷ್ಟೇ ಅಲ್ಲ. ಈ ಚಿತ್ರದಲ್ಲಿ ಯುವಜನತೆಗೆ ಒಂದು ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಧರ್ಮವಿಶ್ ಸಂಗೀತ ನೀಡಿರುವ ಹಾಡುಗಳು ತುಂಬಾ ಚೆನ್ನಾಗಿದೆ. ರಾಜ್ಯಾದ್ಯಂತ ಸುಮಾರು ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಶುಭ ಹಾರೈಕೆಯಿರಲಿ ಎಂದರು ನಿರ್ದೇಶಕ ಶಂಕರ್.
ಛಾಯಾಗ್ರಹಕ ಜೈ ಆನಂದ್, ರಾಮು ಫಿಲಂಸ್ ಕಡೆಯಿಂದ ಹನುಮಂತು ಹಾಗೂ ಸಂಕಲನಕಾರ ಅರ್ಜುನ್ ಕಿಟ್ಟು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
-masthmagaa.com
Contact Us for Advertisement