ವಾರಾಣಸಿಯಲ್ಲಿ ಗಂಗಾರತಿ ಮಾಡಿದ ಬನಾರಸ್ ಹೀರೋ ಝೈದ್ ಖಾನ್!

masthmagaa.com:

ಗಂಗೆಯ ತಟದಲ್ಲಿ ತೆರೆದುಕೊಳ್ಳುವ ಅದ್ಭುತ ಪ್ರೇಮಕಥಾನಕದ ಚಿತ್ರ ಬನಾರಸ್. ಆ ಕಥೆಗೂ ಭಾರತದಲ್ಲಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿರುವ ತಾಯಿ ಗಂಗೆಗೂ ಅವಿನಾಭಾವ ನಂಟಿದೆ. ಬಹುಶಃ ಬರಿಗಣ್ಣಿಗೆ ಕಾಣದ, ಮನಸಿಗಷ್ಟೇ ತಾಕುವ ಆ ಸೆಳೆತದಿಂದಲೋ ಏನೋ ನಾಯಕ ಝೈದ್ ಖಾನ್ ಮತ್ತು ನಾಯಕಿ ಸೋನಲ್ ಮೊಂತೆರೊ ಅವರನ್ನು ಮತ್ತೆ ಮಾಯಗಂಗೆ ತನ್ನತ್ತ ಸೆಳೆದುಕೊಂಡಿದ್ದಾಳೆ. ಇದೀಗ ಬೇರೆ ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಝೈದ್ ಖಾನ್ ಸೋನಲ್ ಜೊತೆಗೂಡಿ ವಾರಾಣಸಿಗೆ ತೆರಳಿದ್ದಾರೆ. ಸ್ವತಃ ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆಗೆ ನಮಿಸಿದ್ದಾರೆ!

ಈಗೊಂದಷ್ಟು ದಿನಗತಳಿಂದ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಡುವಿರದೆ ಸುತ್ತುತ್ತಿದ್ದಾರೆ. ಬನಾರಸ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ, ಎಲ್ಲವೂ ಸಾರ್ಥಕ್ಯ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಗಮನೀಯ ಅಂಶವೆಂದರೆ, ಈ ಹಾದಿಯಲ್ಲಿ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆಲ್ಲ ಝೈದ್ ಜಾತಿ ಮತಗಳ ಹಂಗಿಲ್ಲದೆ ಭೇಟಿ ನೀಡಿ ಭಕ್ತಿಯಿಂದ ನಮಿಸುತ್ತಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಜೋಡಿಯೀಗ ಪ್ರಚಾರ ಕಾರ್ಯದ ನಿಮಿತ್ತವಾಗಿಯೇ ವಾರಾಣಸಿಗ ಅಂಗಳ ತಲುಪಿಕೊಂಡಿದೆ. ಇಲ್ಲಿಯೇ ಒಂದಷ್ಟು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಗಂಗಾರತಿಯಲ್ಲಿ ಪಾಲ್ಗೊಂಡರು. ವಿಧಿವಿಧಾನಗಳಿಗೆ ತಕ್ಕುದಾಗಿ ಅದರಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ಅದಾದ ನಂತರದಲ್ಲಿ ವಾರಾಣಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿಯೂ ಬನಾರಸ್ ಜೋಡಿ ಭಾಗಿಯಾಗಿದೆ. ಆ ಕಾರ್ಯಕ್ರಮವನ್ನು ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಉದ್ಘಾಟಿಸಿದ್ದಾರೆ. ಬಳಿಕ ಬಲು ಪ್ರೀತಿಯಿಂದ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನಾಡಿ, ಗೆಲುವಾಗಲೆಂದು ಹಾರೈಸಿದ್ದಾರೆ.

ಇದು ನಿಜಕ್ಕೂ ನಾಯಕ ನಟ ಝೈದ್ ಖಾನ್ ಪಾಲಿಗೆ ಸ್ಮರಣೀಯ ಅನುಭವ. ಯಾಕೆಂದರೆ, ಪ್ರಚಾರದ ಹಾದಿಯಲ್ಲಿ ಎಲ್ಲ ಒಳಿತುಗಳೂ ತಾನೇತಾನಾಗಿ ಅವರನ್ನು ಅರಸಿಕೊಂಡು ಬರುತ್ತಿವೆ. ಯಾವ ವಿರೋಧಾಭಾಸ, ಟೀಕೆ ಟಿಪ್ಪಣಿಗಳಿಗೂ ತಲೆ ಕೆಡಿಸಿಕೊಳ್ಳದೆ, ನಾನಿರೋದೇ ಹೀಗೆಂಬಂಥಾ ಮನಃಸ್ಥಿತಿಯಿಂದ ಮುಂದುವರೆಯುತ್ತಿರುವ ಝೈದ್ ಎಲ್ಲರಿಗೂ ಹಿಡಿಸಿದ್ದಾರೆ. ಜಾತಿ ಮತಗಳಾಚೆಗೆ ಈ ಹುಡುಗ ನಮಮ್ಮವನೆಂಬಂಥಾ ಬೆಚ್ಚಗಿನ ಭಾವವನ್ನು ಎಲ್ಲರೊಳಗೂ ಬೇರೂರಿಸುತ್ತಿದ್ದಾರೆ. ಇದುವೇ ಅಮೋಘ ಗೆಲುವಾಗಿ ಅವರ ಕೈಹಿಡಿಯೋದರಲ್ಲಿ ಯಾವ ಸಂದೇಹವೂ ಇಲ್ಲ. ಮತ್ತೆ ಚಿತ್ರೀಕರಣದ ಬಳಿಕ ಗಂಗೆಯ ಸಾಂಗತ್ಯ ಸಿಕ್ಕ ಖುಷಿಯಲ್ಲಿಯೇ ಝೈದ್, ಬನಾರಸ್ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸಾಗಿಸಿದ್ದಾರೆ.

-masthmagaa.com

Contact Us for Advertisement

Leave a Reply