masthmagaa.com:
ರಾಜ್ಯದಲ್ಲಿ ರಣಮಳೆಯ ಆರ್ಭಟ ಮುಂದುವರಿದಿದೆ. ಅದ್ರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಟ್ಟುಬಿಡದೆ ಸುರೀತಿರೋ ಧಾರಾಕಾರ ಮಳೆಯಿಂದ ಜನಜೀವನ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.. ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗೋಳಿಹೊಳೆ ಎಂಬಲ್ಲಿ ಅತಿಹೆಚ್ಚು 278 ಮಿಲಿಮೀಟರ್ ಮಳೆಯಾಗಿದೆ. ಅದ್ಬಿಟ್ರೆ ಕುಂದಾಪುರ ತಾಲೂಕಿನಲ್ಲೇ ಬರೋ ಹಳ್ಳಿಹೊಳೆಯಲ್ಲಿ 244 ಮತ್ತು ಆಲೂರ್ ಎಂಬಲ್ಲಿ 230 ಮಿಲಿಮೀಟರ್ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ವಿಚಾರಕ್ಕೆ ಬಂದ್ರೆ ಆಗುಂಬೆಯಲ್ಲಿ 200 ಮಿಲಿ ಮೀಟರ್… ಚಿಕ್ಕಮಗಳೂರು ವಿಚಾರಕ್ಕೆ ಬಂದ್ರೆ ಬೇಗಾರ್ ಎಂಬಲ್ಲಿ 197 ಮಿಲಿಮೀಟರ್… ದಕ್ಷಿಣ ಕನ್ನಡ ಜಿಲ್ಲೆಯ ಬಾಲ್ನಾಡು ಎಂಬಲ್ಲಿ 172 ಮಿಲಿ ಮೀಟರ್… ಉತ್ತರಕನ್ನಡ ವಿಚಾರಕ್ಕೆ ಬಂದ್ರೆ ಕೊರಳಕೈ ಎಂಬಲ್ಲಿ 169 ಮಿಲಿಮೀಟರ್.. ಕೊಡಗು ವಿಚಾರಕ್ಕೆ ಬಂದ್ರೆ ಗಾಳಿಬೀಡು ಎಂಬಲ್ಲಿ 152 ಮಿಲಿಮೀಟರ್ ಮಳೆಯಾಗಿದೆ..
ಇದು ಕಳೆದ 24 ಗಂಟೆ ಲೆಕ್ಕಾಚಾರ.. ಆದ್ರೆ ಮಳೆಯ ಅಬ್ಬರ ಇನ್ನೂ ಹೆಚ್ಚಾಗೋ ಮುನ್ಸೂಚನೆ ಬಂದಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವೊಂದು ಕಡೆ ಭಾರಿ ಮಳೆಯಾಗೋ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳ ಕೆಲವೊಂದು ಕಡೆ ಸಾಧಾರಣ ಮಳೆಯಾಗೋ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆ ಇನ್ನೂ ನಾಲ್ಕೈದು ದಿನ ಮುಂದುವರಿಬಹುದು ಅಂತಾನೂ ಭಾರತೀಯ ಹವಾಮಾನ ಇಲಾಖೆ ಹೇಳಿದೆ.
-masthmagaa.com
Contact Us for Advertisement