masthmagaa.com:
ಇತ್ತೀಚೆಗೆ ಕೆಟ್ಟ ವಿಚಾರಗಳಿಗೆ ದೇಶದಲ್ಲಿ ಸುದ್ದಿಯಾಗ್ತಾ ಇರೋ ನಮ್ಮ ರಾಜ್ಯದಲ್ಲಿ ಇವತ್ತು ಮತ್ತೊಂದು ಅವಘಡ ನಡೆದಿದೆ. ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವ್ರನ್ನ ಹುಬ್ಬಳ್ಳಿಯ ಹೋಟೆಲ್ ಒಂದ್ರಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. 40 ಸೆಕಂಡ್ನಲ್ಲಿ 60 ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲಾಗಿದೆ ಅಂತ ವರದಿಯಾಗಿದೆ. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಇವ್ರು ಕರ್ನಾಟಕದಲ್ಲಿ ಮನೆಮಾತಾಗಿದ್ರು. ಇದೀಗ ಆಶೀರ್ವಾದ ಪಡೆಯುವ ನೆಪದಲ್ಲಿ ಬಂದಿದ್ದ ದುಷ್ಕರ್ಮಿಗಳು ಚಂದ್ರಶೇಖರ್ಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯನ್ನ ಕಂಡು ದಿಗ್ಭ್ರಮೆಗೊಂಡ ಅಲ್ಲಿದ್ದ ಜನ ಮತ್ತು ಹೋಟೆಲ್ ಸಿಬ್ಬಂದಿ ಗುರೂಜಿಯನ್ನ ರಕ್ಷಿಸಲು ಮುಂದಾಗಿಲ್ಲ. ದುಷ್ಕರ್ಮಿಗಳು ಸ್ಥಳದಿಂದ ಓಡಿಹೋದ ನಂತ್ರ ಚಂದ್ರಶೇಖರ್ ಅವ್ರನ್ನ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವ್ರು ಸಾವನ್ನಪ್ಪಿದ್ದಾರೆ ಅಂತ ಘೋಷಿಸಲಾಗಿದೆ. ಇನ್ನು ಈ ಸಂಬಂಧ ಈಗ ಇಬ್ಬರು ಆರೋಪಿಗಳನ್ನ ಪೋಲಿಸರು ಬೆಳಗಾವಿಯ ರಾಮದುರ್ಗದ ಬಳಿ ಅರೆಸ್ಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಇವ್ರಿಬ್ರು ಮಹಾಂತೇಶ್ ಶಿರೋಳ್ ಹಾಗು ಮಂಜುನಾಥ್ ದಮ್ಮವಾಡ ಅಂತ ಹೇಳಲಾಗ್ತಿದೆ. ಜೊತೆಗೆ ಇಬ್ಬರೂ ಆರೋಪಿಗಳು ಗುರೂಜಿ ಸಂಸ್ಥೆಯಲ್ಲಿಯೇ ಕೆಲಸ ಮಾಡ್ತಿದ್ರು ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಮಹಾಂತೇಶ್ ಪತ್ನಿ ವನಜಾಕ್ಷಿ ಅನ್ನೋವ್ರನ್ನ ಕೂಡ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮೇಲ್ನೋಟಕ್ಕೆ ಈ ಕೊಲೆ ಬೇನಾಮಿ ಆಸ್ತಿಗಾಗಿ ನಡೆದಿದೆ ಅಂತ ಅನುಮಾನ ವ್ಯಕ್ತವಾಗಿದೆ. ಗುರೂಜಿ ವನಜಾಕ್ಷಿ ಹೆಸರಿನಲ್ಲಿ ಹಲವು ಆಸ್ತಿಗಳನ್ನ ಹೊಂದಿದ್ರು ಎನ್ನಲಾಗಿದೆ. ಇನ್ನು ಇದಕ್ಕೂ ಮೊದಲು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಕಮಿಷನರ್ ಲಾಬೂರಾಮ್, ಹತ್ಯೆಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿಗಳ ಪತ್ತೆಗೆ 5 ತಂಡ ರಚನೆ ಮಾಡಲಾಗಿದೆ ಅಂತ ಹೇಳಿದ್ರು. ಗೃಹಸಚಿವ ಅರಗ ಜ್ಞಾನೇಂದ್ರ ಮಾತಾಡಿ, ಇತ್ತೀಚೆಗೆ ಒಬ್ಬ ಸಿಬ್ಬಂದಿಯನ್ನ ಕೆಲಸದಿಂದ ತೆಗದಿರೋದೆ ಹತ್ಯೆಗೆ ಕಾರಣ ಇರಬಹುದು ಅಂತ ಶಂಖೆ ವ್ಯಕ್ತಪಡಿಸಿದ್ರು. ಸಿಎಂ ಬೊಮ್ಮಾಯಿ, ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ರು.
-masthmagaa.com
Contact Us for Advertisement