masthmagaa.com:
ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಭಾನುವಾರ ಭಾರಿ ಗದ್ದಲ ಎಬ್ಬಿಸಿದ್ದ 8 ಮಂದಿ ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡವರಲ್ಲಿ ರಾಜ್ಯಸಭಾ ಉಪಸಭಾಪತಿ ಎದುರು ರೂಲ್ ಬುಕ್ ಹರಿದು ಹಾಕಿ, ಅವರ ಮೈಕನ್ನು ಎಳೆದಾಡಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಕೂಡ ಇದ್ದಾರೆ. ಇವರ ಜೊತೆಗೆ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಕಾಂಗ್ರೆಸ್ನ ರಾಜೀವ್ ಸತವ್, ಸೈಯದ್ ನಸೀರ್ ಹುಸೇನ್, ರಿಪುನ್ ಬೋರಾ, ಸಿಪಿಐಎಂನ ಕೆ.ಕೆ. ರಾಗೇಶ್, ಎಲಮಾರನ್ ಕರೀಂ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದ್ದಾರೆ.
ಅಶಿಸ್ತಿನ ವರ್ತನೆ ಮತ್ತು ಉಪಸಭಾಪತಿ ಹರಿವಂಶ್ ಸಿಂಗ್ಗೆ ಬೆದರಿಕೆ ಹಾಕಿದ ಹಿನ್ನೆಲೆ ಈ 8 ಮಂದಿ ಸಂಸದರನ್ನು ಒಂದು ವಾರ ಕಾಲ ಅಮಾನತು ಮಾಡಲಾಗಿದೆ ಅಂತ ರಾಜ್ಯಸಭಾ ಸ್ಪೀಕರ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ರು. ಇದರ ಬೆನ್ನಲ್ಲೇ 8 ಸದಸ್ಯರನ್ನು ಅಮಾನತುಗೊಳಿಸುವಂತೆ ಕೋರಿ ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯ್ತು. ಸಂಸದರ ಅಮಾನತನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ಈ ಹಿನ್ನೆಲೆ ರಾಜ್ಯಸಭಾ ಕಲಾಪವನ್ನು ಹಲವು ಬಾರಿ ಮುಂದೂಡಲಾಯ್ತು.
ಇನ್ನು ರಾಜ್ಯಸಭೆ ಉಪಸಭಾಪತಿ ಹರಿವಂಶ್ ಸಿಂಗ್ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಕೂಡ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ.
-masthmagaa.com
Contact Us for Advertisement