masthmagaa.com:
ಭಾರತೀಯ ಕುಸ್ತಿ ಒಕ್ಕೂಟದ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದಿಲ್ಲಿ ಪೊಲಿಸರು ಎರಡು FIR ಹಾಗೂ 10 ದೂರುಗಳನ್ನು ದಾಖಲಿಸಿರೋ ವಿಷಯ ಈಗ ಮುನ್ನೆಲೆಗೆ ಬಂದಿದೆ. ದಿಲ್ಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಎರಡು FIRಗಳ ಪ್ರಕಾರ, ಲೈಂಗಿಕ ಬಯಕೆ ಈಡೇರಿಸಲು ಮಹಿಳಾ ಕುಸ್ತಿಪಟುಗಳನ್ನು ಒತ್ತಾಯಿಸಿರೊ ಆರೋಪ ಬ್ರಿಜ್ ಭೂಷಣ್ರ ಮೇಲಿದೆ. ಇದಲ್ಲದೆ, ಲೈಂಗಿಕ ಶೋಷಣೆ, ಅನುಚಿತವಾಗಿ ಸ್ಪರ್ಶಿಸುವುದು, ಬೆದರಿಕೆ, ಲೈಂಗಿಕ ಕಿರುಕುಳ, ಅನುಚಿತ ವರ್ತನೆ ಸಂಬಂಧ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 10 ದೂರುಗಳು ದಾಖಲಾಗಿವೆ. ಈ FIRಗಳು ಈ ಹಿಂದೆಯೇ ದಾಖಲಾಗಿದ್ದು, ಈಗ ಮುನ್ನೆಲೆಗೆ ಬಂದಿವೆ. ಇತ್ತ ದಿನದಿಂದ ದಿನಕ್ಕೆ ಪ್ರಕರಣ ಗಂಭೀರವಾಗ್ತಿರೊ ಹಿನ್ನೆಲೆ ಮಾಧ್ಯಮಗಳ ಎದುರು ಯಾವುದೇ ಹೇಳಿಕೆ ನೀಡದಂತೆ ಬ್ರಿಜ್ ಭೂಷಣ್ರಿಗೆ ಸೂಚಿಸಲಾಗಿದೆ. ಅಲ್ದೇ ಬ್ರಿಜ್ ಭೂಷಣ್ ಆಯೋಜಿಸಿದ್ದ ಅಯೋಧ್ಯೆ ರ್ಯಾಲಿಗೆ ಅನುಮತಿ ನೀಡಲು ಉತ್ತರ ಪ್ರದೇಶದ ಸರ್ಕಾರ ನಿರಾಕರಿಸಿದೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿರುವ FIRನ ವಿವರಗಳು ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಸಂಸದ ಅಯೋಧ್ಯ ರ್ಯಾಲಿ ರದ್ದುಗೊಳಿಸಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಂತ ಪುನರುಚ್ಚರಿಸಿದ್ದಾರೆ. ಇನ್ನೊಂದ್ ಕಡೆ ಕುಸ್ತಿಪಟುಗಳಿಗೆ ಎದುರಾದ ದೌರ್ಜನ್ಯದ ಬಗ್ಗೆ 1983ರ ಏಕದಿನ ವಿಶ್ವಕಪ್ ವಿಜೇತ ತಂಡ ತೀವ್ರ ಕಳವಳ ವ್ಯಕ್ತಪಡಿಸಿದೆ. ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ತಂಡ ಹೇಳಿಕೆ ಬಿಡುಗಡೆ ಮಾಡಿದೆ. ಕಷ್ಟಪಟ್ಟು ಗಳಿಸಿರೊ ಪದಕಗಳನ್ನ ಗಂಗಾ ನದಿಯಲ್ಲಿ ಎಸೆಯುವ ಕುರಿತು ನಮಗೆ ಕಳವಳವಾಗಿದೆ. ಆ ಮೆಡಲ್ಗಳು ಹಲವು ವರ್ಷಗಳ ಪ್ರಯತ್ನ, ತ್ಯಾಗ, ದೃಢತೆ, ಪರಿಶ್ರಮವನ್ನ ಸೂಚಿಸುತ್ತವೆ. ಅವು ದೇಶದ ಹೆಮ್ಮೆ. ಹೀಗಾಗಿ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಒತ್ತಾಯಿಸುತ್ತೇವೆ. ಹಾಗೂ ಕುಸ್ತಿಪಟುಗಳ ಅಳಲನ್ನ ಆಲಿಸಿ, ಅವರ ಸಮಸ್ಯೆ ಬೇಗನೇ ಸಾಲ್ವ್ ಆಗಲಿ ಅಂತ ಬಯಸುತ್ತೇವೆ ಅಂತ ಕಪಿಲ್ ದೇವ್, BCCIನ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಸುನೀಲ್ ಗವಾಸ್ಕರ್ ಸೇರಿದಂತೆ ವಿಶ್ವಕಪ್ ವಿಜೇತ ಟೀಂ ಹೇಳಿಕೆಯನ್ನ ರಿಲೀಸ್ ಮಾಡಿದೆ. ಇನ್ನು ಇತ್ತ ಕುಸ್ತಿಪಟುಗಳಿಗೆ ಬೆಂಬಲ ನೀಡಿರೋ ರೈತ ಮುಖಂಡರು, ಸರ್ಕಾರಕ್ಕೆ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಗಡುವನ್ನ ನೀಡಿದ್ದಾರೆ. ಜೂನ್ 9 ರ ಒಳಗೆ ಕುಸ್ತಿಪಟುಗಳ ಸಮಸ್ಯೆಯನ್ನ ಆಲಿಸಿ, ಬ್ರಿಜ್ ಭೂಷಣ್ರನ್ನ ಅರೆಸ್ಟ್ ಮಾಡಬೇಕು. ಇಲ್ಲ ಅಂದ್ರೆ ಅತಿದೊಡ್ಡ ಪ್ರತಿಭಟನೆಯನ್ನ ಫೇಸ್ ಮಾಡಬೇಕು ಅಂತ ಎಚ್ಚರಿಕೆ ನೀಡಿದ್ದಾರೆ.
-masthmagaa.com
Contact Us for Advertisement