masthmagaa.com:
ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿದ್ದಾರೆ. ಇವತ್ತು ಮಧ್ಯಾಹ್ನ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಅವರು, ಮಧ್ಯಾಹ್ನ ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಭೋಜನ ಸವಿದ್ರು. ಈ ವೇಳೆ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಕೂಡ ಜೊತೆಯಲ್ಲಿದ್ರು. ನಂತರ ನೃಪತುಂಗ ವಿವಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ರು. ಈ ವೇಳೆ ಬಸವಣ್ಣ ಮತ್ತು ಅವರ ವಚನಗಳನ್ನು ಅಮಿತ್ ಶಾ ಹಾಡಿ ಹೊಗಳಿದ್ರು. ಇನ್ನು ಅಮಿತ್ ಶಾ ಭೇಟಿ ಹಿನ್ನೆಲೆ ಹಲವೆಡೆ ಪೊಲೀಸರು ರಸ್ತೆ ಬ್ಲಾಕ್ ಮಾಡಿದ್ರಿಂದ ವಾಹನ ಸವಾರರು ಗಂಟೆಗಟ್ಟಲೆ ಪರದಾಡಬೇಕಾಯ್ತು. ಕೆಲವು ಕಡೆಯಂತೂ ಜೋರಾಗಿ ಹಾರ್ನ್ ಮಾಡಿ ವಾಹನ ಸವಾರರು ಟ್ರಾಫಿಕ್ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು. ನಾವು ಒಂದು ಗಂಟೆಯಿಂದ ಕಾಯ್ತಿದ್ದೀವಿ. ಅಮಿತ್ ಶಾ ವಿಐಪಿ ಆದ್ರೆ ನಮಗೇನು.. ಅವರಿರೋರು ನಮ್ಮ ಕೆಲಸ ಮಾಡಕ್ಕೆ ಅಂತ ಕಿಡಿಕಾರಿದ್ರು.ಇನ್ನು ಕಾಂಗ್ರೆಸ್ ನಾಯಕರು ಅಲ್ಲಲ್ಲಿ ಪ್ರತಿಭಟನೆ ನಡೆಸಿ ಅಮಿತ್ ಶಾ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ರು. ಜೊತೆಗೆ ರಾಜ್ಯ ಕಾಂಗ್ರೆಸ್ ಘಟಕ ಅಮಿತ್ ಶಾಗೆ ಹಲವು ಪ್ರಶ್ನೆಗಳನ್ನು ಕೇಳಿ ಟ್ವೀಟ್ ಮಾಡಿದೆ. ಇನ್ನು ಇವತ್ತು ಅಮಿತ್ ಶಾ ಸಮ್ಮುಖದಲ್ಲೇ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಬಿಜೆಪಿ ಸೇರಿದ್ದಾರೆ.
ಇನ್ನು ಸಿಎಂ ಬದಲಾವಣೆ ಕೂಗು ಕೂಡ ಜಾಸ್ತಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ಬಸವರಾಜ್ ಬೊಮ್ಮಾಯಿ ಓರ್ವ ಕಾಮನ್ ಮ್ಯಾನ್ ಸಿಎಂ. ಒಳ್ಳೆಯ ಆಡಳಿತ ನೀಡ್ತಿದ್ದಾರೆ. ನಾಯಕತ್ವ ಬದಲಾವಣೆ ಅನ್ನೋದು ಕೇವಲ ಕಾಲ್ಪನಿಕ ಅಷ್ಟೆ ಅಂತ ಹೇಳಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರೋ ಆರ್ ಅಶೋಕ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ.. ಈ ಬಗ್ಗೆ ಯಾರೂ ಕನಸು ಕಾಣಬೇಡಿ. ಗಾಳಿಗೋಪುರ ಕಟ್ಟಬೇಡಿ ಅಂತ ಸ್ವಪಕ್ಷೀಯರಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಇನ್ನು ಬಿಎಸ್ ಯಡಿಯೂರಪ್ಪ ಕೂಡ ಮಾತನಾಡಿ, ನಾಯಕತ್ವದ ಬದಲಾವಣೆ ಇಲ್ಲ.. ಸಚಿವ ಸಂಪುಟ ವಿಸ್ತರಣೆಯಾಗಲಿದೆ ಅಷ್ಟೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement