masthmagaa.com:

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಜೋರಾಗಿ ಸ್ಫೋಟಗೊಂಡಿದೆ. ಎಷ್ಟರಮಟ್ಟಿಗೆ ಅಂದ್ರೆ ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಆಗ್ರಹ ಮಾಡಿರೋದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಆ ಮಟ್ಟಿಗೆ ಅಸಮಾಧಾನ ಸ್ಫೋಟಗೊಂಡಿದೆ. ‘ಯಾರು ತಮ್ಮನ್ನ ಬ್ಲ್ಯಾಕ್​ಮೇಲ್ ಮಾಡ್ತಾರೋ ಅಂಥವರನ್ನೇ ಮುಖ್ಯಮಂತ್ರಿಗಳು ಇವತ್ತು ಸಚಿವರನ್ನಾಗಿ ಮಾಡಿದ್ದಾರೆ. ಹೀಗೆ ಬ್ಲ್ಯಾಕ್​ಮೇಲ್ ಮಾಡಿದವ್ರು 3 ಜನ ಇದ್ದಾರೆ. ಅದರಲ್ಲಿ ಒಬ್ಬರನ್ನ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಉಳಿದ ಇಬ್ಬರಿಗೆ ಇವತ್ತು ಮಂತ್ರಿಗಿರಿ ಕೊಟ್ಟಿದ್ದಾರೆ. ಮೂರೂ ಜನ ಕೂಡ ಕಳೆದ 3 ತಿಂಗಳಿನಿಂದ ಯಡಿಯೂರಪ್ಪನವರ ಕೆಲವೊಂದು ಸಿಡಿಗಳನ್ನ ಇಟ್ಕೊಂಡು ಬ್ಲ್ಯಾಕ್​ಮೇಲ್ ಮಾಡ್ತಿದ್ರು. ಅದ್ರಲ್ಲಿ ಒಬ್ರಂತೂ ಸಿಡಿ ಜೊತೆಗೆ ವಿಜಯೇಂದ್ರಗೆ ಇವತ್ತು ಹಣ ಸಂದಾಯ ಮಾಡಿದ್ದಾರೆ. ಈ ಮೂಲಕ ವೀರಶೈವ ಲಿಂಗಾಯತ ಸಮುದಾಯ ತಲೆ ತಗ್ಗಿಸುವಂತಹ ಅಪವಿತ್ರ ಕೆಲಸವನ್ನ ಯಡಿಯೂರಪ್ಪ ಮಾಡಿದ್ದಾರೆ’ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ‘ಯಡಿಯೂರಪ್ಪನವರ ಕುಟುಂಬ ರಾಜ್ಯ ಬಿಜೆಪಿಯನ್ನ ಹೈಜಾಕ್ ಮಾಡಿದೆ. ಒಂದೇ ಮನೆಯಲ್ಲಿ ಒಬ್ಬರು ಮುಖ್ಯಮಂತ್ರಿ, ಮತ್ತೊಬ್ಬರು ರಾಜ್ಯ ಬಿಜೆಪಿ ಉಪಾಧ್ಯಕ್ಷರು (ಬಿ.ವೈ. ವಿಜಯೇಂದ್ರ), ಮತ್ತೊಬ್ಬರು ಲೋಕಸಭೆ ಸದಸ್ಯರು (ಬಿ.ವೈ. ರಾಘವೇಂದ್ರ) ಇದ್ದಾರೆ. ಯಡಿಯೂರಪ್ಪ ದೆಹಲಿಗೆ ಹೋದಾಗ ಅವರ ಜೊತೆ ಹಿರಿಯ ಸಚಿವರು ಹೋಗಲಿಲ್ಲ. ಬದಲಾಗಿ ಬಿ.ವೈ ವಿಜಯೇಂದ್ರ ಹೋಗಿದ್ರು. ಯಡಿಯೂರಪ್ಪ ವಿರುದ್ಧ ಹಲವು ಕೇಸ್​ಗಳಿಗೆ. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ. ಎರಡು ತಿಂಗಳ ಹಿಂದೆ ಲಿಂಗಾಯತ ಸಮುದಾಯಕ್ಕೆ 83 ಕೋಟಿ ಅನುದಾನ ಕೋಟ್ಟಿದ್ದಾರೆ. ಒಂದ್ವೇಳೆ ತಮ್ಮನ್ನ ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ರೆ ಲಿಂಗಾಯತರೆಲ್ಲಾ ಸೇರಿ ಪ್ರತಿಭಟನೆ ಮಾಡುವಂತೆ ಹೇಳಿದ್ದರು’ ಅಂತಾನೂ ಸಿಎಂ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply