masthmagaa.com:
ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರೋ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಪುದುಚೆರಿ ಸಿಎಂ ವಿ. ನಾರಾಯಣಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದು, ಸರ್ಕಾರ ಬಿದ್ದಿದೆ. ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡ ಬೆನ್ನಲ್ಲೇ ಸಿಎಂ ನಾರಾಯಣಸ್ವಾಮಿ ಲೆಫ್ಟಿನೆಂಟ್ ಗವರ್ನರ್ಗೆ ರಾಜೀನಾಮೆ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ನಾರಾಯಣಸ್ವಾಮಿ, ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಕೇಂದ್ರ ಸರ್ಕಾರ ವಿಪಕ್ಷಗಳ ಜೊತೆ ಸೇರ್ಕೊಂಡ್ ಸರ್ಕಾರವನ್ನ ಬೀಳಿಸಿದ್ರು ಅಂತ ಹೇಳಿದ್ದಾರೆ. ಅಂದ್ಹಾಗೆ ಕಳೆದೊಂದು ತಿಂಗಳಲ್ಲಿ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲ ನೀಡಿದ್ದ ಡಿಎಂಕೆ ಪಕ್ಷದ ನಾಲ್ಕೈದು ಶಾಸಕರು ರಾಜೀನಾಮೆ ನೀಡಿದ್ದರಿಂದ ನಾರಾಯಣಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನೆಲೆ ಇವತ್ತು ಬಹುಮತ ಸಾಬೀತುಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದರು. ಬಹುಮತ ಸಾಬೀತು ಮಾಡಲಾಗದೆ ನಾರಾಯಣಸ್ವಾಮಿ ರಿಸೈನ್ ಮಾಡಿದ್ದಾರೆ. ಮತ್ತೊಂದುಕಡೆ ನಾವೀಗ ಸರ್ಕಾರ ರಚಿಸಲ್ಲ, ಮುಂಬರೋ ಚುನಾವಣೆಯಲ್ಲಿ ಗೆದ್ದು ಎನ್ಡಿಎ ಸರ್ಕಾರವನ್ನ ರಚಿಸುತ್ತೇವೆ ಅಂತ ಪುದುಚೆರಿ ಬಿಜೆಪಿ ಘಟಕ ಹೇಳಿದೆ.
-masthmagaa.com
Contact Us for Advertisement