masthmagaa.com:
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಾನೇ ಇದೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತ ಒಂದಷ್ಟುಶಾಸಕರು , ಇಲ್ಲ ಸಿದ್ರಾಮಯ್ಯ ಅವರೇ ಮುಂದುವರೆಯಲಿ ಅಂತ ಇನ್ನೊಂದಷ್ಟು ಶಾಸಕರು ತಮ್ಮ ನಾಯಕರ ಪರ ಬ್ಯಾಟ್ ಬೀಸ್ತಿದ್ದಾರೆ. ಮೊನ್ನೆಯಷ್ಟೇ ಡಿಕೆಶಿವ ಕುಮಾರ್ ಪರ 70 ಶಾಸಕರು ಇದ್ದಾರೆ ಅಂತ ಕೆಲ ಡಿಕೆಶಿ ಬಣದ ಶಾಸಕರು ಹೇಳಿಕೆ ಕೊಟ್ಟಿದ್ರು. ಇದೀಗ ಸಿದ್ರಾಮಯ್ಯ ಬಣ ಅಂತ ಹೇಳಲಾಗುವ ನಾಯಕರು ಇದಕ್ಕೆ ಟಕ್ಕರ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಅಂತ ಸಿದ್ದರಾಮಯ್ಯ ಆಪ್ತ, ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ. ಇನ್ನೊಂದು ಕಡೆ ಸಿಎಂ ಕುರ್ಚಿ ಭದ್ರವಾಗಿದೆ ಅಂತ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಸಹ ಹೇಳಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿ ಡಿಕೆ ವರ್ಸಸ್ ಸಿದ್ದರಾಮಯ್ಯ ಬಣದ ಕಾಳಗ ಮತ್ತಷ್ಟು ಜೋರಾಗಿದೆ. ಇನ್ನು ಮೊನ್ನೆ ಡಿಕೆ ಶಿವಕುಮಾರ್ ಅವರನ್ನ ಬಿಟ್ಟು ಡಾ. ಜಿ ಪರಮೇಶ್ವರ್ ಅವರು ಸಿದ್ದರಾಮಯ್ಯವರನ್ನ ಮಾತ್ರ ಊಟಕ್ಕೆ ಕರೆದಿದ್ದಾರೆ ಅಂತ ಸುದ್ದಿ ಹರಿದಾಡಿತ್ತು. ಊಟಕ್ಕೆ ಹೋದಾಗ ರಾಜಕೀಯ ಚರ್ಚೆ ಆಗಿದೆ ಅಂತ ಒಂದಷ್ಟು ಜನ ಹೇಳಿದ್ರೆ ಇನ್ನೊಂದಷ್ಟು ಜನ ಇಲ್ಲ ಅಂತ ಈ ವಿಚಾರವನ್ನ ತಳ್ಳಿ ಹಾಕಿದ್ರು. ಆದ್ರೆ ಊಟ, ಮೀಟಿಂಗ್ ಆದ ಬೆನ್ನಲ್ಲೇ ಮಹದೇವಪ್ಪ ಅವರು ಈ ಹೇಳಿಕೆ ಕೊಟ್ಟಿರೋದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
Contact Us for Advertisement