masthmagaa.com:
ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿ, ಪಕ್ಷದ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಶಾಸಕ ಸಿಟಿ ರವಿ ಅವರನ್ನ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಈ ಸ್ಥಾನಕ್ಕೆ ಮಧ್ಯಪ್ರದೇಶ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಬಿ.ಎಲ್ ಸಂತೋಷ್ ಅವ್ರನ್ನ ಮುಂದುವರಿಸಲಾಗಿದೆ. ಇದೇ ವೇಳೆ 38 ನಾಯಕರನ್ನು ವಿವಿಧ ಹುದ್ದೆಗಳಿಗೆ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ. ಇತ್ತ ಸಿ.ಟಿ ರವಿ ಅವ್ರನ್ನ ರಾಷ್ಟ್ರೀಯ ಮಂಡಳಿಯಿಂದ ಕೈಬಿಟ್ಟ ಬೆನ್ನಲ್ಲೇ ರವಿ ಅವ್ರಿಗೆ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನ ಸಿಗುತ್ತೆ ಅಂತ ಸುದ್ದಿ ಹರಿದಾಡ್ತಿದೆ. ಒಬ್ಬರು ಎರಡು ಹುದ್ದೆಯಲ್ಲಿ ಇರಬಾರದು ಅನ್ನೊ ಕಾರಣಕ್ಕೆ ರಾಷ್ಟ್ರೀಯ ಮಂಡಳಿಯಿಂದ ಅವರನ್ನ ತೆಗೆದು ಹಾಕಿ ರಾಜ್ಯ ರಾಜಕಾರಣಕ್ಕೆ ಕಳುಹಿಸಲಾಗುತ್ತಿದೆ ಅನ್ನೊ ಮಾತು ಕೇಳಿ ಬರ್ತಿವೆ. ಆದ್ರೆ ಈ ಬಗ್ಗೆ ಬಿಜೆಪಿಯಿಂದ ಯಾವುದೇ ಕಮೆಂಟ್ ಬಂದಿಲ್ಲ. ವಿಧಾನಸಭೆಯಲ್ಲಿ ಸೋತ್ರು ಅನ್ನೋ ಕಾರಣಕ್ಕೆ ನೆಗ್ಲೆಟ್ ಮಾಡಿದ್ದಾರೋ ಅಥವಾ ಬದಲಾವಣೆ ತರೋಕೆ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಟಿ ರವಿ, ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದ. ಇನ್ನು ಮುಂದೆಯೂ ಅದೇ ಭಾವದಿಂದ ಕೆಲಸ ಹಾಗೂ ಪಕ್ಷ ನೀಡಿದ ಜವಾಬ್ದಾರಿಯನ್ನ ನಿರ್ವಹಿಸುತ್ತೇನೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement