masthmagaa.com:
ಮಯನ್ಮಾರ್ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿ ಬಳಿಕ ಶುರುವಾಗಿದ್ದ ಪ್ರತಿಭಟನೆ ಈಗ ನಾಗರಿಕ ಯುದ್ಧದ ಸ್ವರೂಪ ಪಡೆದುಕೊಂಡಿದೆ. ಕಾಯಾ ರಾಜ್ಯದಲ್ಲಿ ಕರೆನ್ನಿ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಅನ್ನೋ ಸಂಘಟನೆ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ನಡೆದ ಸಂಘರ್ಷದಲ್ಲಿ 40 ಮಂದಿ ಯೋಧರು ಸಾವನ್ನಪ್ಪಿದ್ಧಾರೆ. ಸ್ಥಳೀಯ ಪೊಲೀಸ್ ಸ್ಟೇಷನ್ ಮೇಲೆ ಬಂಡುಕೋರರು ದಾಳಿ ನಡೆಸಿದ್ದು, ಅದ್ರಲ್ಲಿ 15 ಯೋಧರು ಸಾವನ್ನಪ್ಪಿದ್ದಾರೆ. ನಾಲ್ವ ಯೋಧರನ್ನು ಜೀವಂತವಾಗಿಯೂ ಸೆರೆಹಿಡಿಯಲಾಗಿದೆ. ಆಮೇಲೆ ಪೊಲೀಸ್ ಸ್ಟೇಷನ್ಗೇ ಬೆಂಕಿ ಇಟ್ಟಿದ್ದಾರೆ. ಈ ಘಟನೆಯಲ್ಲಿ ಬಂಡುಕೋರರ ಗುಂಪಿನ ಸದಸ್ಯನೊಬ್ಬ ಜೀವ ಬಿಟ್ಟಿದ್ದು, ಐವರಿಗೆ ಗಾಯಗಳಾಗಿವೆ. ಮತ್ತೊಂದು ಘಟನೆಯಲ್ಲಿ ಲೊಯ್ಕಾವ್ ಮತ್ತು ಡೆಮೆಸೋ ಹೈವೇಯಲ್ಲಿ 24 ಯೋಧರನ್ನು ಬಂಡುಕೋರರ ಗುಂಪು ಹತ್ಯೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸ್ಥಳೀಯ ನಿವಾಸಿಯೊಬ್ರು, ನಾವು ಪ್ರತಿಭಟನೆ ಮಾಡಿ ಜೈಲು ಸೇರೋದು, ಸಾಯೋದ್ರ ಬದಲು ಕ್ರಾಂತಿ ಮಾಡಿ ಹುತಾತ್ಮರಾಗೋಕೆ ಬಯಸುತ್ತೇವೆ. ಜನರ ಮೇಲೆ ಮಿಲಿಟರಿ ಸರ್ಕಾರದ ದಬ್ಬಾಳಿಕೆ ಹೆಚ್ಚಾಗಿದ್ರಿಂದ ನಾವು ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಅಂತ ಹೇಳಿದ್ದಾರೆ. ಅಂದಹಾಗೆ ಫೆಬ್ರವರಿಯಲ್ಲಿ ಮಯನ್ಮಾರ್ ಮಿಲಿಟರಿ ಅಧಿಕಾರವನ್ನು ವಶಕ್ಕೆ ಪಡೆದುಕೊಂಡು, ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸನ್ ಸು ಕ್ಯೀ ವಿರುದ್ಧ ಕೇಸ್ ಹಾಕಿ ಬಂಧನದಲ್ಲಿಟ್ಟಿದೆ. ಇದ್ರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಲೇ ಇದ್ದು, ಈವರೆಗೆ ಮಿಲಿಟರಿ ಸರ್ಕಾರದ ಗುಂಡಿಗೆ 800ಕ್ಕೂ ಅಧಿಕ ಜನ ಬಲಿಯಾಗಿದ್ಧಾರೆ. ಇದೀಗ ಈ ಹೋರಾಟ ನಾಗರಿಕ ಯುದ್ಧದ ಸ್ವರೂಪ ಪಡೆದುಕೊಂಡಿದೆ.
-masthmagaa.com
Contact Us for Advertisement