masthmagaa.com:
ಕೆಲ ಕಾಲ ಬೂದಿ ಮುಚ್ಚಿದ ಕೆಂಡದಂತಿದ್ದ ಜಮ್ಮು-ಕಾಶ್ಮಿರದಲ್ಲಿ ಮತ್ತೆ ಹಿಂಸೆಯ ದಿನಗಳು ಆರಂಭ ಆಗಿವೆ. ನಿನ್ನೆ ಮೊನ್ನೆ ಎಲ್ಲ ನಾಗರಿಕರ ಹತ್ಯೆ-ಅದರ ಆರೋಪಿಗಳ ಬಂಧನದ್ದು ಭಾರೀ ಸುದ್ದಿಯಾಗಿತ್ತು.
ಈಗ ಜಮ್ಮು ಕಾಶ್ಮೀರದ ಪಿರ್ ಪಂಜಲ್ ರೇಂಜ್ ನ ರಾಜೌರಿ ಸೆಕ್ಟರ್ ನಲ್ಲಿ ಎನ್ಕೌಂಟರ್ ವೇಳೆ ಒಬ್ಬ ಜೂನಿಯರ್ ಕಮೀಷನ್ಡ್ ಆಫೀಸರ್ ಸೇರಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಂಭೀರ ಗಾಯಗೊಂಡಿದ್ದ ಯೋಧರನ್ನ ಹತ್ತಿರದ ಆಸ್ಪತ್ರೆಗೆ ಸಾಗಿಲಾಯ್ತಾದ್ರೂ ಉಳಿಸಿಕೊಳ್ಳಲು ಆಗಲಿಲ್ಲ. ಘಟನೆ ಬಳಿಕ ಮತ್ತಷ್ಟು ಯೊಧರು ಧಾವಿಸಿ ಬಂದು ಉಗ್ರರ ಮೇಲೆ ಮುಗಿಬಿದ್ರು. ಮತ್ತೆ ಎನ್ಕೌಂಟರ್ ಮುಂದುವರಿದಿತ್ತು.
ಇದಕ್ಕೂ ಮೊದಲು, ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನ ಗುರಿಯಾಗಿಸಿ ನಡೆದ ದಾಳಿಗಳಿಗೆ ಸಂಬಂಧಪಟ್ಟಂತೆ ಪೊಲೀಸರು 4 ಉಗ್ರ ಸಹಚರರನ್ನ ಬಂಧಿಸಿದ್ದರು. ಇವ್ರು ಲಷ್ಕರ್ ಉಗ್ರ ಸಂಘಟನೆಯ TRF ಮಾಡ್ಯೂಲ್ ನ ಸದಸ್ಯರು ಅಂತ ಗೊತ್ತಾಗಿದೆ. ಇನ್ನೂ ಒಬ್ಬ ಉಗ್ರ ಇಮ್ತಿಯಾಜ್ ಧರ್ ತಲೆ ಮರೆಸಿಕೊಂಡಿದ್ದ. ಬಳಿಕ ಆತನನ್ನೂ ಹುಡುಕಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. ಇವರೆಲ್ಲ ಪಾಕಿಸ್ತಾನದಲ್ಲಿ ನೆಲೆಸಿರೊ ಲಷ್ಕರ್ ಉಗ್ರ ಲಾಲಾ ಉಮರ್ ಸೂಚನೆ ಮೇರೆಗೆ ಈ ರೀತಿ ನಾಗರಿಕರನ್ನ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದರು ಅಂತ ತನಿಖೆ ವೇಳೆ ಗೊತ್ತಾಗಿದೆ.
ಈ ನಡುವೆ ಸರ್ಕಾರವೇನೋ ಕಾಶ್ಮೀರದಲ್ಲಿನ ಅಲ್ಪಸಂಖ್ಯಾತರಿಗೆ, ಕಾಶ್ಮೀರಿ ಪಂಡಿತರಿಗೆ ಭರವಸೆ ಕೊಡ್ತಾನೆ ಇದೆ. ನಿಮ್ಮ ಸೇಫ್ಟಿ ನಾವ್ ನೋಡ್ಕೋತೀವಿ ಅಂತ. ಆದ್ರೆ ಉಳಿದ ಅಲ್ಪಸ್ವಲ್ಪ ಕಾಶ್ಮೀರಿ ಪಂಡಿತರೂ ಕಣಿವೆ ಬಿಟ್ಟು ಪಲಾಯನ ಮಾಡ್ತಿದ್ದಾರೆ. ಉಗ್ರರ ಟಾರ್ಗೆಟ್ ಆಗೋ ಭೀತಿಯಲ್ಲಿ ತಮ್ಮ ಹುಟ್ಟೂರು ಬಿಟ್ಟು ವಲಸೆ ಹೋಗ್ತಿದ್ದಾರೆ. 1947ರಿಂದಲೂ ಇದು ನಡೀತಾ ಬಂದಿದೆ. ಸ್ವಾತಂತ್ರ್ಯ ಬಂದಾಗ ದೊಡ್ಡ ಪ್ರಮಾಣದ ಪಂಡಿತರು ಕಾಶ್ಮೀರದಿಂದ ಹೊರ ಬಂದ್ರು. 1990ರ ದಶಕದಲ್ಲೂ ಹಿಂಸೆ ತಡೆಯಲಾಗದೆ ಭಯಭೀತಗೊಂಡ ಪಂಡಿತರ ಅಲ್ಲಿಂದ ಹೊರಬಂದ್ರು. ಇತ್ತಯೀಚೆಗೆ ಅವರನ್ನೆಲ್ಲ ವಾಪಾಸ್ ಕಾಶ್ಮಿರಕ್ಕೆ ಕರೆದುಕೊಂಡು ಬಂದು ಸೆಟಲ್ ಮಾಡೋ ನಿಟ್ಟಿನಲ್ಲಿ ಸರ್ಕಾರ ಒಂದಷ್ಟು ಪ್ರಯತ್ನ ಆರಂಭ ಮಾಡಿತ್ತು. ಆದ್ರೆ ಈಗ ಮತ್ತೆ ಟಾರ್ಗೆಟೆಡ್ ದಾಳಿಗಳು ಶುರುವಾಗಿರೋದ್ರಿಂದ ಹೆದರಿ, ಅಳಿದುಳಿದ ಪಂಡಿತರೂ ಕಾಶ್ಮಿರದಿಂದ ಪಲಾಯನ ಮಾಡ್ತಿದ್ದಾರೆ.
-masthmagaa.com
Contact Us for Advertisement