masthmagaa.com:
ಕಳೆದ ನೂರಾರು ವರ್ಷಗಳಿಂದ ಬ್ರಿಟನ್ ರಾಣಿ ಧರಿಸುವ ಕಿರೀಟದಲ್ಲಿರುವ ಕೊಹಿನೂರ್ ವಜ್ರವನ್ನ ಪುನಃ ಭಾರತಕ್ಕೆ ತರಲು ಪ್ರಧಾನಿ ಮೋದಿ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜತಾಂತ್ರಿಕ ಅಭಿಯಾನವೊಂದನ್ನ ಭಾರತ ಸರ್ಕಾರ ಶುರು ಮಾಡಲಿದೆ ಅಂತ ಮಾಹಿತ ಲಭ್ಯವಾಗಿದೆ. ಕೊಹಿನೂರ್ ಅಷ್ಟೇ ಅಲ್ದೇ ಬ್ರಿಟಿಷರು ಭಾರತವನ್ನ ಆಳ್ತಿದ್ದ ಟೈಮಲ್ಲಿ ತೆಗೆದುಕೊಂಡ ಹೋಗಿರೋ ಸಾವಿರಾರು ಇತರ ವಸ್ತುಗಳನ್ನ ಕೂಡ ಇಂಡಿಯಾಕ್ಕೆ ವಾಪಾಸ್ ತರೋಕೆ ಈ ಅಭಿಯಾನ ಕೈಗೊಳ್ಳಲಾಗ್ತಿದೆ ಅಂತ ಹೇಳಲಾಗಿದೆ. ಇನ್ನು ಈ ಡಿಪ್ಲೋಮ್ಯಾಟಿಕ್ ಕ್ಯಾಂಪೇನ್ಗೆ ʻreckoning with the pastʼ ಅಂತ ಹೆಸರಿಡಲಾಗಿದೆ ಅಂತ ವರದಿಯಾಗಿದೆ. ಈ ಅಭಿಯಾನದಲ್ಲಿ ಭಾರತದ ಕಲಾಕೃತಿಗಳನ್ನ ಹೊಂದಿರೋ ಬ್ರಿಟನ್ನ ವಿವಿಧ ಸಂಸ್ಥೆಗಳಿಗೆ, ಮ್ಯೂಸಿಯಂಗಳಿಗೆ ಯುಕೆಯಲ್ಲಿರೊ ಭಾರತದ ಅಧಿಕಾರಿಗಳು ಫಾರ್ಮಲ್ ಆಗಿ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಇತ್ತ ಯುಕೆ ಮಾಧ್ಯಮಗಳು ಭಾರತದ ಈ ಕ್ರಮ ತಪ್ಪು ಅಂತ ವರದಿ ಮಾಡ್ತಿವೆ. ಆದ್ರೆ ಕೊಹಿನೂರ್ ಸೇರಿದಂತೆ ಪ್ರತಿಮೆಗಳು, ಕಲಾಕೃತಿಗಳನ್ನ ವಾಪಸ್ ಪಡೆಯಲು ಭಾರತ ರಾಜತಾಂತ್ರಿಕ ಮಾರ್ಗವನ್ನ ಅನುಸರಿಸಿದೆ ಅನ್ನೊದನ್ನ ಯುಕೆ ತಿರಸ್ಕರಿಸಿದೆ. ಅಂದ್ಹಾಗೆ 1849ರಲ್ಲಿ 10 ವರ್ಷದ ರಾಜ ಮಹಾರಾಜ ದುಲೀಪ್ ಸಿಂಗ್ ಅವರು ಲಾಹೋರ್ ಒಪ್ಪಂದಕ್ಕೆ ಬಲವಂತವಾಗಿ ಸಹಿ ಮಾಡಿದ ಬಳಿಕ, ಕೊಹಿನೂರ್ನ್ನ ರಾಣಿ ವಿಕ್ಟೋರಿಯಾ ಮೊದಲ ಬಾರಿಗೆ ಧರಿಸಿದ್ರು. ಅಂದಿನಿಂದ ಇಂದಿನವರೆಗೆ ಕೊಹಿನೂರ್ ಮೇಲೆ ಬ್ರಿಟಿಷ್ ರಾಜ ಕುಟುಂಬ ಹಕ್ಕನ್ನ ಚಲಾಯಿಸುತ್ತಾ ಬಂದಿದೆ. ಇನ್ನು ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದಿರೊ ಒಟ್ಟು ಸಂಪತ್ತಿನ ಅತ್ಯಂತ ಸಣ್ಣ ತುಣುಕು ಈ ಕೊಹಿನೂರ್. ಕೊಹಿನೂರ್ ಜೊತೆಗೆ ತೈಮೂರ್ ರೂಬಿ ಸ್ಟೋನ್, ಟಿಪ್ಪು ಸುಲ್ತಾನ್ಗೆ ಸೇರಿದ ರತ್ನದಿಂದ ಮಾಡಲ್ಪಟ್ಟ ಹುಲಿ ತಲೆ, ಅಮರಾವತಿ ಮಾರ್ಬಲ್ಸ್, ಹರಿಹರ ದೇವರ ಪ್ರತಿಮೆ, ಶಹಜಾನ್ನ ವೈನ್ ಕಪ್ಗಳು, ಮಹಾರಾಜಾ ರಣ್ಜೀತ್ ಸಿಂಗ್ರ ಸಿಂಹಾಸನ ಸೇರಿದಂತೆ ಹಲವಾರು ಪ್ರಮುಖ ಕಲಾಕೃತಿಗಳು ಸೇರಿವೆ. 1765 ರಿಂದ 1938ರವರೆಗೆ ಸುಮಾರು 45 ಟ್ರಿಲಿಯನ್ ಡಾಲರ್ ಅಂದ್ರೆ ಸುಮಾರು 3,690 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನ ಭಾರತದಿಂದ ಕೊಳ್ಳೆ ಹೊಡೆದಿದ್ದಾರೆ ಅಂತ ಸಂಶೋಧಕರು ಹೇಳಿದ್ದಾರೆ.
-masthmagaa.com
Contact Us for Advertisement