masthmagaa.com:
ರಾಜ್ಯ ಸಚಿವ ಸಂಪುಟಕ್ಕೆ ಸೇರುವ 7 ಜನರ ಹೆಸರು ಫೈನಲ್ ಆಗಿದೆ. ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್. ಶಂಕರ್, ಸಿ.ಪಿ. ಯೋಗೇಶ್ವರ್ ಮತ್ತು ಎಸ್. ಅಂಗಾರ ಇವತ್ತು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಅಂತ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. 7 ಜನರ ಲಿಸ್ಟ್ ಅನ್ನು ರಾಜಭವನಕ್ಕೆ ಕಳಿಸಲಾಗಿದೆ. ಒಂದು ಸ್ಥಾನವನ್ನ ಖಾಲಿ ಇಡಲಾಗಿದೆ ಅಂತಾನೂ ಸಿಎಂ ಬಿಎಸ್ವೈ ಹೇಳಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇತ್ತೀಚೆಗಷ್ಟೇ ಆರ್.ಆರ್. ನಗರ ಉಪಚುನಾವಣೆಯಲ್ಲಿ ಗೆದ್ದಿದ್ದ ಮುನಿರತ್ನಗೆ ಸದ್ಯಕ್ಕೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. 7 ಜನರಲ್ಲಿ ಎಂಟಿಬಿ ನಾಗರಾಜ್, ಆರ್. ಶಂಕರ್ ಮತ್ತು ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯರಾಗಿದ್ದರೆ, ಉಳಿದವರು ಶಾಸಕರಾಗಿದ್ದಾರೆ.
ಇನ್ನು ಸಿ.ಪಿ. ಯೋಗೇಶ್ವರ್ಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಎಂಎಲ್ಸಿ ಹೆಚ್. ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಯೋಗೇಶ್ವರ್ ವಿರುದ್ಧ 420 ಕೇಸ್ ಇದೆ. ಆತನಿಗೆ ಸಚಿವ ಸ್ಥಾನ ಕೊಟ್ಟಿದ್ದೇಕೆ? ಅವನೊಬ್ಬ ಫ್ರಾಡ್, ಅವನು ಸಾಕಷ್ಟು ಜನರಿಗೆ ವಂಚನೆ ಮಾಡಿದ್ದಾನೆ. ಸಿಎಂ ಯಡಿಯೂರಪ್ಪನವರೇ ದೇವರು ನಿಮ್ಮನ್ನ ಒಳ್ಳೇದು ಮಾಡಲ್ಲ. ನೀವು ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಹೀಗಾಗಿ ಸಿದ್ಧಲಿಂಗೇಶ್ವರ ನಿಮಗೆ ಒಳ್ಳೇದು ಮಾಡಲ್ಲ ಅಂತ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬರೋವರೆಗೆ ಕಾದು ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ನಾನು ಸಚಿವ ಸ್ಥಾನಕ್ಕೆ ಲಾಬಿನೇ ಮಾಡಿಲ್ಲ. ಲಾಬಿ ಮಾಡೋರು ಸಚಿವರಾಗ್ತಾರೆ. ಎಂಎಲ್ಸಿಗಳಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ನನಗೆ ಬೇಜಾರಿಲ್ಲ. ಅವರು ನಮ್ಮ ಸರ್ಕಾರ ಬರೋಕೆ ಸಹಾಯ ಮಾಡಿದ್ದಾರೆ. ಆದ್ರೆ ಶಾಸಕರ ಬದಲು ವಿಧಾನ ಪರಿಷತ್ ಸದಸ್ಯರಿಗೆ ಮಂತ್ರಿಗಿರಿ ಕೊಟ್ಟಿದ್ದೇಕೆ ಅಂತ ಜನ ಮಾತಾಡಿಕೊಳ್ತಾರೆ ಅಂತ ಹೇಳಿದ್ರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೂಡ ಅಸಮಾಧಾನ ಸ್ಫೋಟಿಸಿದ್ದಾರೆ. ‘ರೀ ಯಡಿಯೂರಪ್ಪನವರೇ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲು ಮಾನದಂಡಗಳೇನು? ನಿಮಗೆ ನಿಷ್ಠಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ವಾ?’ ಅಂತ ಸತೀಶ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
-masthmagaa.com
Contact Us for Advertisement