masthmagaa.com:
ಲಖೀಂಪುರ ಹಿಂಸಾಚಾರ ಪ್ರಕರಣ ಇವತ್ತು ಸುಪ್ರೀಂಕೋರ್ಟ್ನಲ್ಲೂ ವಿಚಾರಣೆಗೆ ಬಂತು. ಪ್ರಕರಣ ಸಂಬಂಧ ಯಾರ ವಿರುದ್ಧ ಕೇಸ್ ಹಾಕಿದ್ದೀರಿ..? ಎಷ್ಟು ಮಂದಿಯನ್ನು ಅರೆಸ್ಟ್ ಮಾಡಿದ್ದೀರಿ ಅಂತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಾಳೆಯೇ ಈ ಪ್ರಕರಣದ ಸದ್ಯದ ಬೆಳವಣಿಗೆ ಬಗ್ಗೆ ನಾಳೆಯೇ ರಿಪೋರ್ಟ್ ಕೊಡಬೇಕು ಅಂತ ಸೂಚಿಸಿದೆ. ಈ ವೇಳೆ ಉತ್ತರಿಸಿದ ಉತ್ತರ ಪ್ರದೇಶ ಸರ್ಕಾರ ಪರ ವಕೀಲರು, ಈಗಾಗಲೇ ಎಫ್ಐಆರ್ ದಾಖಲಿಸಿದ್ದು, ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತೆ ಅಂತ ಹೇಳಿದ್ದಾರೆ. ಅದ್ರ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ ನಿವೃತ್ತ ಜಡ್ಜ್ ಪ್ರದೀಪ್ ಕುಮಾರ್ ಶ್ರೀವಾಸ್ತವ್ ನೇತೃತ್ವದ ಏಕಸದಸ್ಯ ಆಯೋಗ ಕೂಡ ರಚಿಸಿದೆ. ಜೊತೆಗೆ 2 ತಿಂಗಳಲ್ಲಿ ವರದಿ ನೀಡುವಂತೆಯೂ ಸೂಚಿಸಿದೆ..
ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕಾ ಗಾಂಧಿ, ತನಿಖೆ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಅಲ್ಲ. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ನ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲೇ ನಡೆಯಬೇಕು ಅಂತ ಆಗ್ರಹಿಸಿದ್ದಾರೆ.
ಇನ್ನು ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾರನ್ನು ಅರೆಸ್ಟ್ ಮಾಡದೇ ಇದ್ರೆ, ನಾಳೆಯಿಂದ ಉಪವಾಸ ಸತ್ಯಾಗ್ರಹ ಶುರು ಮಾಡ್ತೀನಿ ಅಂತ ನವಜೋತ್ ಸಿಂಗ್ ಸಿಧು ಘೋಷಿಸಿದ್ದಾರೆ. ಈ ನಡುವೆ ಲಖೀಂಪುರ್ ಖೇರಿಗೆ ಹೊರಟಿದ್ದ ಅವರನ್ನು ಸಹರನ್ಪುರದಲ್ಲಿ ವಶಕ್ಕೆ ಪಡೆಯಲಾಗಿದೆ.
ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಅಜಯ್ ಮಿಶ್ರಾ ಮಗ ಆಶೀಶ್ ಮಿಶ್ರಾಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಈಗಾಗಲೇ 13 ಮಂದಿ ವಿರುದ್ಧ ಕೇಸ್ ದಾಖಲಿಸಿ, ಇಬ್ಬರನ್ನು ಇವತ್ತು ವಿಚಾರಣೆಗೆ ಒಳಪಡಿಸಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement