masthmagaa.com:
ದೆಹಲಿ: ಲೋಕಪಾಲ ಸದಸ್ಯ ನ್ಯಾಯಮೂರ್ತಿ ಎ.ಕೆ. ತ್ರಿಪಾಠಿ ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ ಅಂತ ಮೂಲಗಳು ತಿಳಿಸಿವೆ. 62 ವರ್ಷ ವಯಸ್ಸಿನ ಅವರನ್ನು ಏಪ್ರಿಲ್ 2ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬರೋಬ್ಬರಿ ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅವರು ಶನಿವಾರ ರಾತ್ರಿ 8.45ಕ್ಕೆ ಕೊನೆಯುಸಿರೆಳೆದಿದ್ದಾರೆ.
ಅವರ ಪುತ್ರಿ ಹಾಗೂ ಅಡುಗೆ ಕೆಲಸದವರೊಬ್ಬರಿಗೂ ಸೋಂಕು ತಗುಲಿ ಅವರು ಗುಣಮುಖರಾಗಿದ್ದಾರೆ. ಚತ್ತೀಸ್ಗಢ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಕೆ. ತ್ರಿಪಾಠಿ ಏಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ನ ಐಸಿಯುನಲ್ಲಿದ್ದರು. ಬಳಿಕ ಅವರ ಆರೋಗ್ಯ ಗಂಭೀರವಾಗುತ್ತಿದ್ದಂತೇ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು.
ಲೋಕಪಾಲದ ನಾಲ್ವರು ನ್ಯಾಯಾಂಗ ಸದಸ್ಯರ ಪೈಕಿ ಎ.ಕೆ. ತ್ರಿಪಾಠಿ ಕೂಡ ಒಬ್ಬರಾಗಿದ್ದರು. ಮಾರ್ಚ್ 20ರಂದು ಕೊನೆಯದಾಗಿ ಕಚೇರಿಗೆ ಹಾಜರಾಗಿದ್ದರು. ಈ ಹಿನ್ನೆಲೆ ಕಚೇರಿಯನ್ನ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಲೋಕಪಾಲ್ನ ಎಲ್ಲಾ ಸದಸ್ಯರು ವಾಸಿಸುವ ಅಪಾರ್ಟ್ಮೆಂಟ್ ಅನ್ನೂ ಕೂಡ ಸ್ವಚ್ಛಗೊಳಿಸಲಾಗಿದೆ.
-masthmagaa.com
Contact Us for Advertisement