masthmagaa.com:
ಉತ್ತರಪ್ರದೇಶದ ಸಾಧುಗಳ ಹತ್ಯೆಗೆ ಸಂಬಂಧಪಟ್ಟ ಹಾಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅತ್ಯಂತ ಕ್ಷುಲ್ಲಕ ಕಾರಣಕ್ಕೆ ಸಾಧುಗಳ ಹತ್ಯೆಯಾಗಿದೆ ಅಂತ ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. ಹತ್ಯೆ ಆಗಿರುವ ಇಬ್ಬರು ಸಾಧುಗಳು ಇತ್ತೀಚಿಗಷ್ಟೇ ರಾಜು ಅನ್ನುವ ವ್ಯಕ್ತಿಯ ಮೇಲೆ ಕಳ್ಳತನದ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಪಟ್ಟ ಹಾಗೆ ರೊಚ್ಚಿಗೆದ್ದಿದ್ದ ರಾಜು ಸಾಧುಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಹೀಗಾಗಿ ಸೋಮವಾರ ರಾತ್ರಿ ಮಾದಕ ವಸ್ತುವನ್ನು ಸೇವಿಸಿದ ರಾಜು, ಪೂರ್ತಿ ನಶೆ ಏರಿಸಿಕೊಂಡು, ದೊಣ್ಣೆ ತೆಗೆದುಕೊಂಡು ಸಾಧುಗಳು ಮಲಗಿದ್ದ ದೇವಸ್ಥಾನವನ್ನು ಪ್ರವೇಶಿಸಿದ್ದಾನೆ. ಬಳಿಕ ಮನಬಂದಂತೆ ಥಳಿಸಿ ಸಾಧುಗಳನ್ನು ಕೊಂದುಹಾಕಿದ್ದಾನೆ. ಬಳಿಕ ಪೊಲೀಸರು ವಶಕ್ಕೆ ಪಡೆದಾಗಲೂ ನಶೆಯಲ್ಲೇ ಇದ್ದ ರಾಜು, ‘ನಾನು ಏನು ಮಾಡಿಲ್ಲ. ಇದು ದೇವರ ಇಚ್ಚೆ’ ಎಂದು ಹೇಳಿಕೆ ಕೊಟ್ಟಿದ್ದಾನೆ. ತಲ್ವಾರ್ನಿಂದ ಹತ್ಯೆ ಮಾಡಿದ್ದೀಯಂತೆ ಎಂದು ಪೊಲೀಸರು ಪ್ರಶ್ನೆ ಮಾಡಿದಾಗ, ‘ನಾನು ಕೊಂದಿರುವುದು ನಿಜ, ಆದರೆ ದೊಣ್ಣೆಯಿಂದ ಹೊಡೆದು ಕೊಂದಿದ್ದೇನೆ. ತಲ್ವಾರ್ ಬಳಸಿಲ್ಲ’ ಎಂದು ಉತ್ತರಿಸಿದ್ದಾನೆ.
ಘಟನೆಯ ಹಿನ್ನೆಲೆ:
ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಸಾಧುಗಳ ಹತ್ಯೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಅಂತಹದ್ದೇ ಘಟನೆ ವರದಿಯಾಗಿತ್ತು. ಬುಲಂದ್ ಶಹರ್ ಜಿಲ್ಲೆಯ ಅನೂಪ್ಶಹರ್ನ ಪಗೋನಾ ಗ್ರಾಮದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಮಲಗಿದ್ದಾಗ ಬಂದ ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಕೊಂದಿದ್ದ. ಆದ್ರೆ ಗ್ರಾಮಸ್ಥರು ಆರೋಪಿಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು.
ಗ್ರಾಮದಲ್ಲಿ ಒಂದು ಶಿವ ಮಂದಿರವಿದ್ದು, 55 ವರ್ಷದ ಸಾಧು ಜಗನ್ದಾಸ್ ಮತ್ತು 35 ವರ್ಷದ ಸಾಧು ಸೇವಾದಾಸ್ ಇಲ್ಲಿ ವಾಸವಾಗಿದ್ದರು. ಆದ್ರೆ ನಿನ್ನೆ ರಾತ್ರಿ ಇವರನ್ನು ಹತ್ಯೆ ಮಾಡಲಾಗಿತ್ತು. ಇಂದು ಬೆಳಗ್ಗೆ ಸಾಧುಗಳ ಹತ್ಯೆಯಾಗಿರೋದನ್ನು ಗಮನಿಸಿದ ಗ್ರಾಮಸ್ಥರು, ಉದ್ರಿಕ್ತರಾಗಿದ್ದರು.
ಘಟನೆಗೆ ಸಂಬಂಧಪಟ್ಟಹಾಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮಕ್ಕೆ ಆದೇಶ ನೀಡಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಕಾರಣ ಪತ್ತೆ ಹಚ್ಚಿ, ರಾಜು ಆಗಿರಲಿ ಅಥವಾ ಇನ್ಯಾರೇ ಆಗಿರಲಿ, ಅತ್ಯಂತ ಕಠಿಣ ಕ್ರಮ ಆಗಬೇಕು ಅಂತ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕನನ್ನು ಹತ್ಯೆ ಮಾಡಲಾಗಿತ್ತು. ಈಗ ಉತ್ತರಪ್ರದೇಶದ ಸರದಿ.
-masthmagaa.com
Contact Us for Advertisement